ಇಪ್ಪತ್ತು ವರ್ಷಗಳಾದರೂ ಕೊಳೆಯದ ನಾಯಿಯ ಕಳೇಬರ
ಈ ಜಗತ್ತಿನಲ್ಲಿ ಯಾವುದೇ ಜೀವಿಯು ಸತ್ತರೂ ಕೆಲವು ದಿನಗಳ ನಂತರ ಅದು ಕೊಳೆತು ದುರ್ವಾಸನೆ ಬೀರಲಾರಂಭಿಸುವುದು ಇಲ್ಲಿನ ನಿಯಮ. ಆದರೆ 1980 ರಲ್ಲಿ ಜಾರ್ಜಿಯಾ ದೇಶದ ಕಾಡೊಂದರಲ್ಲಿ ಓಕ್ ಮರಗಳನ್ನು ಕತ್ತರಿಸುತ್ತಿದ್ದ ಸಂದರ್ಭ ಮರದ ಟೊಳ್ಳಾದ ಒಳಮೈಯಲ್ಲಿ 20 ವರ್ಷಗಳ ಹಿಂದೆ ಸತ್ತಿದ್ದ ನಾಯಿಯ ಕಳೇಬರವು ದೊರೆತಿದ್ದು, ಅದರ ದೇಹವು ಕೊಳೆಯದೇ ಸಂರಕ್ಷಿತ ಸ್ಥಿತಿಯಲ್ಲೇ ಪತ್ತೆಯಾಗಿತ್ತು. ಹೀಗೆ ದೊರೆತ ನಾಯಿಯನ್ನು ಮರದ ಸಮೇತವಾಗಿ ಕತ್ತರಿಸಿ ತಂದು ಇಲ್ಲಿನ ‘ಫಾರೆಸ್ಟ್ ವರ್ಲ್ಡ್ ಟ್ರೀ ಮ್ಯೂಸಿಯಂ’ ನಲ್ಲಿ ಇಡಲಾಗಿದೆ. ಇದು ಅತ್ಯಂತ ಜನಾಕರ್ಷಣೆಯ ಹಾಗೂ ಕುತೂಹಲದ ಕೇಂದ್ರವಾಗಿದ್ದು, ಈ ನಾಯಿಯ ಕಳೇಬರಕ್ಕೆ ‘ಸ್ಟಕ್ಕಿ’ ಎಂದು ಹೆಸರಿಡಲಾಗಿದೆ.
ನಾಯಿಯ ದೇಹ ಯಾಕೆ ಕೊಳೆತಿಲ್ಲ?

ನಾಯಿಯ ದೇಹ ಕೊಳೆಯದೇ ಮಮ್ಮಿಫೈ ಆಗುವುದಕ್ಕೆ ಪ್ರಮುಖ ಕಾರಣವಿದೆ. ನಾಯಿಯು ಸಿಲುಕಿಕೊಂಡಿದ್ದ ಮರದ ಕಾಂಡವು ಟೊಳ್ಳಾಗಿದ್ದು, ಅದರೊಳಗೆ ಗಾಳಿಯ ಚಲನೆಯು ಸಂಪೂರ್ಣವಾಗಿ ಮೇಲ್ಮುಖವಾಗಿತ್ತು. ಇದರಿಂದಾಗಿ ನಾಯಿಯ ಕಳೇಬರದ ವಾಸನೆ ಕೀಟಗಳಿಗೆ ಸಿಗದಂತಾಗಿದೆ. ವಾಸನೆಯೇನಾದರೂ ಕೀಟ ಹಾಗೂ ಇತರೆ ಜೀವಿಗಳಿಗೆ ದೊರೆಯುತ್ತಿದ್ದರೆ ಅವುಗಳು ಕಳೇಬರವನ್ನು ತಿನ್ನುತ್ತಿದ್ದವು. ಅಲ್ಲದೆ ಮರದೊಳಗಿನ ಭಾಗವು ಸ್ವಲ್ಪವೂ ನೀರಿನಂಶವಿಲ್ಲದೇ ಒಣಗಿದ್ದು, ಓಕ್ ಮರದಲ್ಲಿರುವ ಟ್ಯಾನ್ನಿಕ್ ಆ್ಯಸಿಡ್ ಸತ್ತ ನಾಯಿಯ ಚರ್ಮವು ಮತ್ತಷ್ಟು ಗಟ್ಟಿಯಾಗುವಂತೆ ಮಾಡಿದೆ.
ಸ್ಟಕ್ಕಿ ಪತ್ತೆಯಾದ ಸಮಯಕ್ಕಿಂತ 20 ವರ್ಷಗಳ ಹಿಂದೆ ಅದು ಯಾವುದಾದರೂ ಪ್ರಾಣಿಯನ್ನು ಅಟ್ಟಿಸಿಕೊಂಡು ಹೋಗಿ ಅದು ಮರದ ಪೊಟರೆಯೊಳಗೆ ನುಗ್ಗಿದಾಗ ತಾನೂ ಅದನ್ನು ಹಿಡಿಯಲು ಪೊಟರೆಯೊಳಗೆ ಪ್ರಯತ್ನಪೂರ್ವಕವಾಗಿ ನುಗ್ಗಿ ಅಲ್ಲಿಂದ ಹೊರಬರಲಾರದೇ ಸಿಕ್ಕಿಕೊಂಡು ಸತ್ತಿರಬಹುದೆಂದು ನಂಬಲಾಗಿದೆ. ಅಂದರೆ ಇದು ಸರಿಸುಮಾರು 1980 ರ ಆಸುಪಾಸಿನಲ್ಲಿ ಮರದೊಳಗೆ ಹೋಗಿ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ.

ಮರದೊಳಗೆ ಸಿಲುಕಿದ್ದು ಹೇಗೆ? ನಾಯಿ ಸಣ್ಣ ಪ್ರಾಣಿಯನ್ನು (ಬಹುಶಃ ರಕೂನ್) ಅಟ್ಟಿಸಿಕೊಂಡು ಮರದ ಕಾಂಡದೊಳಗೆ ಹೋಗಿ ಸಿಲುಕಿರಬಹುದೆನ್ನಲಾಗಿದೆ. ಮರದೊಳಗೆ ಸಿಲುಕಿದ ನಂತರ ನಾಯಿ ಸುಮಾರು 28 ಅಡಿ ಮೇಲಕ್ಕೆ ಏರುವಲ್ಲಿ ಯಶಸ್ವಿಯಾಗಿದ್ದು, ಅದರಿಂದ ವಾಪಾಸು ಬರಲಾರದೆ ಉಸಿರುಗಟ್ಟಿ ಅಥವಾ ಆಹಾರವಿಲ್ಲದೇ ಸಾವನ್ನಪ್ಪಿರಬಹದು ಎನ್ನಲಾಗುತ್ತದೆ.
ಫಾರೆಸ್ಟ್ ವರ್ಲ್ಡ್ ಟ್ರೀ ಮ್ಯೂಸಿಯಂನ ಮ್ಯಾನೇಜರ್ನ್ನು ಅಲ್ಲಿಗೆ ಆಗಮಿಸುವ ವೀಕ್ಷಕರು, ಆ ನಾಯಿ ಅಲ್ಲಿ ಹೋಗಿ ಹೇಗೆ ಸಿಲುಕಿಕೊಂಡಿತು ಎಂದು ಪ್ರಶ್ನಿಸುತ್ತಿರುತ್ತಾರೆ. ಅದಕ್ಕೆ ಅವರು ಅದೊಂದು ಬೇಟೆ ನಾಯಿಯಾಗಿದ್ದು, ರಕೂನ್ ನಂತಹ ಯಾವುದೋ ಪ್ರಾಣಿಯನ್ನು ಅಟ್ಟಿಸಿಕೊಂಡು ಹೋಗಿ ಒಳಗಡೆ ಸಿಕ್ಕಿಕೊಂಡು ಸತ್ತಿರಬಹುದೆಂದು ಹೇಳುತ್ತಾರೆ. ಆಗ ವೀಕ್ಷಕರು ಅಯ್ಯೋ ಪಾಪ ಹೀಗೆ ಆಗಬಾರದಿತ್ತೆಂದು ವಿಷಾಧ ವ್ಯಕ್ತಪಡಿಸುತ್ತಾ ಮುಂದೆ ಸಾಗುತ್ತಾರೆ.
ಬೃಹತ್ ಓಕ್ ಮರದ ಪೊಟರೆಯು ವಿಜ್ಞಾನವನ್ನೂ ಮೀರಿಸುವಂತೆ ಶೀತಲೀಕರಣ ಯಂತ್ರದಂತೆ ಕಾರ್ಯನಿರ್ವಹಿಸಿರುವುದು ಪ್ರಪಂಚದ ಅಚ್ಚರಿಯೇ ಸರಿ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ – 574198
ದೂ: 9742884160