ಚೆಂಗಾಯಣ ಮತ್ತು ಇತರ ಹಾಸ್ಯ ಲೇಖನಗಳು
ಚೆಂಗಾಯಣ ಮತ್ತು ಇತರ ಹಾಸ್ಯ ಲೇಖನಗಳು
ಲೇಖಕರು: ಜಿ ವಿ ಅರುಣ
ಪ್ರಕಟಣೆ: ವಿದ್ಯಾರಣ್ಯ ಪ್ರತಿಷ್ಠಾನ, ಬೆಂಗಳೂರು
ರಾಮನ ಕಥೆ ರಾಮಾಯಣ ಎನಿಸಿದರೆ; ಚೆಂಗನ ಕಥೆ ಚೆಂಗಾಯಣ ಏಕಾಗಬಾರದು ಅಲ್ಲವೇ!!?
ಎಲ್ಲಾರ್ದೂ ಒಂದು ದಾರಿ ಆದ್ರೆ ಎಡವಟ್ಟನದೇ ಒಂದು ದಾರಿ ಎಂಬ ಗಾದೆಯಂತೆ ಕಥಾನಾಯಕ ಚೆಂಗ ಸೋಸ್ಯಲ್ ಸರ್ವೀಸ್ ಮಾಡಿಕೊಂಡು ತನ್ನ ಸೆಲ್ಫ್ ಸರ್ವೀಸನ್ನೂ ಮಾಡಿಕೊಳ್ಳುವ ಲೀಡರ್ರು.
ತನ್ನ ನಿಸ್ವಾರ್ಥ(!!?) ಸೇವೆಯನ್ನು ಎಲ್ಲರಿಗೂ ಒದಗಿಸಲು ತುದಿಗಾಲಲ್ಲಿ ನಿಲ್ಲುವ ಚೆಂಗನ ಪ್ರತಿಯೊಂದು ಕಾರ್ಯದ ಹಿಂದೆಯೂ ಒಂದು ಹಿಡನ್ ಅಜೆಂಡಾ ಇರುತ್ತದೆ.
ಅವನು ಯೂನಿಯನ್ ಎಲೆಕ್ಸನ್ ಗೆ ನಿಲ್ಲೋವಾಗ ಸಾವ್ಕಾರ್ರ ಮಗಳನ್ನು ಆಕರ್ಷಿಸಲು ಮಾಡಬೇಕೆಂದುಕೊಂಡ ಸ್ಟ್ರೈಕು,ಕಾಲೇಜಿನಲ್ಲಿ ೪೨೦೦೦ ಖರ್ಚು ಮಾಡಿ ಬೆನಿಫಿಟ್ ಸೋ ನಡೆಸಿ ,ವಿದ್ಯಾರ್ಥಿ ಕಲ್ಯಾಣ ನಿಧಿಗೆ ಕೊಟ್ಟ ೫೦೦ ರೂ;ಸಾವ್ಕಾರ್ರ ಮಗಳನ್ನು ಮದುವೆಯಾಗುವ ಮೊದಲು ಊರಿಗೊಂದು ಕೊಳಾಯಿ ಹಾಕಿಸುವ ಪಿಲಾನು ಹೀಗೆ ಚೆಂಗ ಎಷ್ಟೊಂದು ವಿಚಾರಗಳನ್ನು ಇಟ್ಟುಕೊಂಡು ಸೋಸ್ಯಲ್ ಸರ್ವೀಸ್ ಮಾಡ್ತಾನೆ.
ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುವ ನೂರೆಂಟು ವಿಚಾರಗಳನ್ನು,ಸಮಸ್ಯೆ-ಸವಾಲುಗಳನ್ನು ಚೆಂಗ ನ ಪಾತ್ರದ ಮೂಲಕ ಹಾಸ್ಯದ ಲೇಪನ ಹಚ್ಚಿ ನಮ್ಮ ಮುಂದೆ ಇಡುವ ಲೇಖಕರು ಶೋಧನ ಹಾಸ್ಯದ ಮೂಲಕ ವಿಶಿಷ್ಟತೆ ಮೆರೆದಿದ್ದಾರೆ.
![](https://sahityamaithri.com/wp-content/uploads/2022/12/3b5b9313-5cbf-4916-af23-dcb34a9e789b.jpg)
ಕನ್ನಡದ ಹಾಸ್ಯ ಸಾಹಿತ್ಯಕ್ಕೆ ಚೆಂಗ ಹೊಸಬನಾದರೂ….ಹೊಸ ಚಿಗುರು,ಹಳೆಬೇರಿನ ತಳಿ ಇವನದ್ದು.
ಸಮಾಜದ ಕಟು ವಾಸ್ತವಗಳನ್ನು ತಿಳಿಹಾಸ್ಯದ ಮೂಲಕ ಓದುಗರ ಮುಂದಿಡುವ ಲೇಖಕ ಜಿ ವಿ ಅರುಣರು …ಇದಕ್ಕೆ ಚೆಂಗನ ಪಾತ್ರವನ್ನು ಸೃಷ್ಟಿಸಿದ್ದಾರೆ.
ಬಸ್ ಪ್ರಯಾಣದಲ್ಲೋ,ಕ್ಯಾಬ್ ನಲ್ಲಿ ಆಫಿಸಿಗೆ ಹೋಗುವಾಗಲೋ,ಬಿಡುವಾದಾಗ ಬಿಡಿ ಬರಹಗಳನ್ನು ಓದುವ ಮನಸಿದ್ದಾಗಲೋ ಓದಿಕೊಂಡು ನಗುತ್ತಾ,ನಮ್ಮಲ್ಲೇ ಮಂಥನ ನಡೆಸಲು ಚೆಂಗಾಯಣ ಮತ್ತು….. ಸೂಕ್ತವಾದ ಪುಸ್ತಕ ಎನ್ನಲಡ್ಡಿಯಿಲ್ಲ.
ಚೆಂಗನ ಗಾಡ್ ಫಾದರ್ರು ಜಿ ವಿ ಅರುಣ ಅವರಿಗೆ ಶುಭಾಶಯ ಕೋರತ್ತಾ….
ಇಲ್ಲಿಂದಲೇ ಕೈಮುಗಿವೆ ,ಅಲ್ಲಿಂದಲೇ ಹರಸು ಎನ್ನದೇ, ಚೆಂಗನ ಪುಸ್ತಕ ಕೊಂಡು ಓದೋಣ…
ಪ್ರತಿಗಳಿಗೆ ಪ್ರಿಸಂ ಬುಕ್ಸ್ ಅವರನ್ನು ದೂರವಾಣಿ 080 26714108 / 26713979 ಅಥವಾ ಆನ್ಲೈನ್
https://prismbooks.com/chengayana-mattu-itara-haasya-lekhanagalu-humorous-fiction-in-kannada.html ಸಂಪರ್ಕಿಸಬಹುದು.
![](https://sahityamaithri.com/wp-content/uploads/2022/12/Sunil-Haleyur-4.jpg)
ಸುನೀಲ್ ಹಳೆಯೂರು