ತುಳಸಿ ಮತ್ತು ತುಳಸೀ ದಳ – ಯಂಡಮೂರಿ ವೀರೇಂದ್ರನಾಥ್
ಯಂಡಮೂರಿ ವೀರೇಂದ್ರ ಅವರ ಅದ್ಭುತ ಕಾದಂಬರಿಗಳು. ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದು ಓದುಗರ ಕುತೂಹಲ ಕೆರಳಿತ್ತವೆ. ಮುಂದಿನ ತಿರುವು ಏನೆಂದು ಕಾತರದಿಂದ ಓದುವಂತೆ ಮಾಡುತ್ತದೆ. ತುಳಸಿ ಮೊದಲನೇಯ ಭಾಗವಾಗಿದ್ದು, ತುಳಸಿ ದಳ ನಂತರದ್ದಾಗಿದೆ.
ವಿಜ್ಞಾನ, ಮಾಟ-ಮಂತ್ರ, ವಶೀಕರಣ (ಹಿಪ್ನಾಟಿಸಂ) ಕ್ಷುದ್ರ ಶಕ್ತಿ, ದೈವೀಶಕ್ತಿಗಳ ಬಗ್ಗೆ ಬೆಳಕು ಚೆಲ್ಲುವಂತ ರೋಮಾಂಚನಕಾರಿ ಕಥೆಯಾಗಿದೆ. ಮಾನವನ ಅಜ್ಞಾನ, ಅದ್ಭುತ ಸಂಶೋಧನೆ, ಅವನ ಪೈಶಾಚಿಕ ಕೃತ್ಯಗಳು, ಹಣದ ವ್ಯಾಮೋಹ ಇದೆಲ್ಲವನ್ನೂ ಲೇಖಕರು ಅತ್ಯಂತ ಮನೋಜ್ಞವಾಗಿ ಬಿಚ್ಚಿಟ್ಟಿದ್ದಾರೆ.
![](https://sahityamaithri.com/wp-content/uploads/2023/07/81sD2UbYhWL._AC_UF10001000_QL80_.jpg)
ಕಥಾನಾಯಕಿ ತುಳಸಿಯ ಮೇಲೆ ಕಾಷ್ಮೋರಾ ಮತ್ತು ವಶೀಕರಣ ಪ್ರಯೋಗಿಸಿ ನರಳುವಂತೆ ಮಾಡುವುದು ಹೃದಯವಿದ್ರಾವಕವಾಗಿದೆ. ಹಿಪ್ನಾಟಿಸಂ ನಿಂದ ತುಳಸಿಯನ್ನು ಹಿಂಸಿಸುವ ಮತ್ತು ಸಿದ್ದೇಶ್ವರಿ ದೇವಿಯ ಹೆಸರಿನಲ್ಲಿ ವಿಜ್ಞಾನದ ನೆರವಿನಿಂದಲೇ ಜನರನ್ನು ಮೋಸಗೊಳಿಸುವ ಶ್ರೀನಿವಾಸ ಪಿಳ್ಳೆಯ ಪಾತ್ರ ಬಹಳ ಕ್ರೂರವಾಗಿ ಬಿಂಬಿತವಾಗಿದೆ. ಜಯದೇವನನ್ನು ಕೊಲ್ಲಲು ಬಳಸುವ ಕೆಮಿಕಲ್ಸ್ ಗಳು ಓದುಗರಿಗೂ ತರಿಸುವಂತಿದೆ.
ಸನ್ಯಾಲ್ ನ ಕಂಪ್ಯೂಟರೈಸ್ಡ್ ಶಸ್ತ್ರಚಿಕಿತ್ಸೆ ನಿಜಕ್ಕೂ ಲೇಖರರ ಊಹೆ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಪಂಡಿತ ನ ಅಘಾಧ ಜ್ಞಾನ, ಅಬ್ರಕಡಬ್ರನ ಕ್ಷುದ್ರ ಶಕ್ತಿಯ ಬಗೆಗಿನ ಕುತೂಹಲ ಮತ್ತು ಕೆಲವೊಮ್ಮೆ ಪ್ರದರ್ಶಿಸುವ ಬುದ್ಧಿವಂತಿಕೆ, ಶ್ರೀಧರನ ನಾಸ್ತಿಕತೆ, ವಿದ್ಯಾಪತಿಯ ಗೆಳೆಯನಿಗೆ ಮಾಡುವ ಸಹಾಯ ಎಲ್ಲವೂ ಸ್ವಲ್ಪವೂ ಬೇಸರವಿಲ್ಲದೇ ಕಾದಂಬರಿ ಓದಲು ಮುದ ನೀಡುತ್ತವೆ.
![](https://sahityamaithri.com/wp-content/uploads/2023/07/91G5zSq7GHL._AC_UF10001000_QL80_.jpg)
ಕಾದ್ರಾ, ವಿಷಾಚಿಯಂತ ಬಂದುಹೋಗುವ ಮಾಂತ್ರಿಕರ ಪಾತ್ರ, ಸದಾನಂದ ಚಕ್ರವರ್ತಿ, ಕಥೆಗೆ ತಿರುವು ನೀಡುವ ಸಾಹಿರ್ ಮತ್ತು ಸಂತ ಫಕೀರ್, ಅಮಾಯಕರಾಗಿ ಸಾಯುವ ಅಬ್ರಕಡಬ್ರನ ಹೆಂಡತಿ ಮತ್ತು ಇಸ್ಮಾಯಿಲ್. ತುಳಸಿಯ ತಾಯಿ ಶಾರದ, ತುಳಸಿಗೆ ಚಿಕಿತ್ಸೆ ನೀಡುವ ಡಾಕ್ಟರ್ ಪಾರ್ಥಸಾರಥಿ, ಹಿಪ್ನಾಟೈಸ್ ಗೆ ಒಳಗಾದ ಡಾಕ್ಟರ್, ಕೆಲವೇ ಕ್ಷಣ ಬಂದರೂ ಮುಖ್ಯವೆನಿಸುವ ಆಚಾರ್ಯರು, ಭಾಗ ಎರಡರ ಚಿದಾನಂದ ಸ್ವಾಮಿ, ಪುಟ್ಟ ಮತ್ತು ಸರಸ್ವತಿ ಚಂದ್ರ, ವಿದ್ಯಾವಂತೆಯಾಗಿಯೂ ಅಜ್ಞಾನದಿಂದ ಸಾಯುವ ಅನಿತಾ, ಮೂಗನಾದರೂ ಪ್ರತೀಕಾರ ತೀರಿಸಿಕೊಳ್ಳುವ ನಾರಾಯಣ, ಮೋಸಗಾರ ರಾಮಯ್ಯ ಎಲ್ಲರೂ ಕಾದಂಬರಿಯಲ್ಲಿ ಪ್ರಮುಖರೆನಿಸುತ್ತಾರೆ.
ಇನ್ನೊಂದು ಮುಖ್ಯ ಪಾತ್ರ ಡಾಕ್ಟರ್ ಜಯದೇವ. ತುಳಸಿಯನ್ನು ಬದುಕಿಸುವಲ್ಲಿ ಇವರದು ಮಹತ್ವದ ಪಾತ್ರ. ಕಥೆಗೆ ನಾಯಕನೆನಿಸುವ ಪಾತ್ರ ದಾರ್ಕಾ. ಮಾನವನ ಪೈಶಾಚಿಕ ಕೃತ್ಯಕ್ಕೆ ಬೆರಗಾಗುತ್ತಾನೆ. ನಾಗರೀಕ ಜಗತ್ತಿನ ಜೊತೆ ಹೊಂದಿಕೊಂಡು ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ. ಆಚಾರ್ಯರಿಂದ ಸೌಮ್ಯತೆ ಹೊಂದಿ ಕೊನೆಗೆ ತುಳಸಿಯನ್ನು ಉಳಿಸಲು ಪ್ರಯತ್ನಸಿ ತಾನೇ ಸಾವನ್ನಪ್ಪುತ್ತಾನೆ.
ಈ ಎರಡೂ ಪುಸ್ತಕಗಳನ್ನು ಓದಲು ಆಸಕ್ತಿಯುಳ್ಳವರು ರಘುವೀರ್ ಸಮರ್ಥ್ ರವರನ್ನು 9945939436 ಕ್ಕೆ ಸಂಪರ್ಕಿಸಿ್ದರೆ ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೇ ತಲುಪುವ ವ್ಯವಸ್ಥೆ ಮಾಡುತ್ತಾರೆ.
![](https://sahityamaithri.com/wp-content/uploads/2023/07/e63036e4-42c2-407d-8b9a-b4b472fae59b.jpg)
ವೇದಾವತಿ ಭಟ್ಟ
ಮುಂಬೈ