ಧಾರಿಣಿ…
ಅಂದು ಭಾವಗಳ ಮಳೆಯಲಿ
ತೋಯ್ದು ಹನಿಗಳು ತೊಟ್ಟಿಕ್ಕಿದಾಗ
ನಿನ್ನದೇ ನೆನಪು..
ಮಳೆ ಎಂದರೆ
ನಿನ್ನ ಮಡಿಲಲಿ ನಾ ಮಲಗಿ
ಉಂಡ ಮಮತೆಯ ಸಾಮೀಪ್ಯ
ನನ್ನೊಳಗೆ ನೀ ಆವರಿಸಿ
ಜೀವರಸ ಮೈಯೆಲ್ಲಾ ಹರಿದಾಗ
ಆತ್ಮಸಾಂಗತ್ಯದ ಅನುಭೂತಿ..
ನಿನ್ನೊಳಗೆ ಜೀವ ಮಿಸುಕಿ
ದೇಹವೆಲ್ಲಾ ಜೀಕಿದಾಗ
ಹೃದಯದ ಮಾತುಗಳು ನರ್ತಿಸಿ..
ಮುದುಡಿದ್ದ ಕನಸುಗಳು
ಕನವರಿಕೆಗಳು ಜೀವತಾಳಿ
ನಿನ್ನ ಮುಂಗುರುಳ ನೇವರಿಸಿದವು
ನಿನ್ನೆದೆಯ ನಡುವಲ್ಲಿ
ಹರಿದ ಬಿಸಿಯುಸಿರು
ಕರುಳಬಳ್ಳಿಯ ಸಂಬಂಧದ ಸಾಕ್ಷಿಪ್ರಜ್ಞೆ..
ಕೊನೆಗೂ ನನ್ನ ಭಾವದ
ಹನಿಗಳೆಲ್ಲಾ ಕೂಡಿ ನದಿಯಾಗಿ
ಹರಿದು ಕಾವ್ಯಗಂಗೆಯಾದಾಗ
ನನಗನ್ನಿಸಿದ್ದು…
ಹೆಣ್ಣೆಂದರೆ ಕೇವಲ ಹೆಣ್ಣಲ್ಲ
ಅಕ್ಕನ ಅಕ್ಕರೆ,ಅಮ್ಮನ ಆರೈಕೆ
ಬಿಕರಿಯಾಗುವ ಅಂಗಡಿಯಲ್ಲ..
ದೇಹವೇ ದೇಗುಲವಾಗಿ
ಚಿಮ್ಮಿದ ಜೀವಚೈತನ್ಯ!!
ಅರಿತೂ ಅರಿಯದವಳು.
ಅರಿಯದೇ ಆಸರೆಯಾದವಳು
ಕತ್ತಲೆಯ ಕೋಣೆಯಲ್ಲಿ
ಹಣತೆ ಹಚ್ಚಿದವಳು...
![](http://sahityamaithri.com/wp-content/uploads/2023/10/Sunil-Haleyur-1.jpg)
ಸುನೀಲ್ ಹಳೆಯೂರು