ಒಂಟಿ ನಾವಿಕನ ಬದುಕಲ್ಲಿ
ನಡು ದಾರಿಯಲ್ಲಿ ಬಡಿದ
ಹೆದ್ದೆರೆಯಂತವಳು!
ಬಡಿದ ರಭಸಕ್ಕೆ
ಬದುಕು ಅಲ್ಲೋಲ ಕಲ್ಲೋಲ
ನಸುಕಿನ ಬಾನಿನಲ್ಲಿ
ಆಕಾಶಕ್ಕೆ ಉಕ್ಕಿದ ಸ್ವರ
ಹಿಗ್ಗಿ ತಳ ತಳ ಹೊಳೆದು
ಎಳೆದು ತನ್ನೊಳಸೆಳೆದು
ನಿಶ್ಚಲ ಮೂರ್ತಿಗೆ ಜೀವ
ನಾದವಾದಂತೆ!
ಅನುಭಾವಿಯಂತೆ ಮದ್ಯೆ
ನೀರವದಿ ಕಾವು ಕೂತು
ಕಣ್ಮುಚ್ಚಿ ತೆರೆವ ಹೊಸ ಭಾವದ ರೆಕ್ಕೆ
ವಚನಕ್ಕೆ ವಚನ ಕೊಟ್ಟಂತೆ
ಕಟ್ಟಿದ ಸೇತು ಬಂಧ
ಯಾವ ಚೌಕಟ್ಟಿಗೂ ಸಿಗದ
ಆತ್ಮ ಬಂಧವಿವಳು

– ಕುಮಾರ್ ಕೆ ಪಿ