ಪ್ರತ್ಯಗಾತ್ಮ ಚಿಂತನ (ನೇನಂಶಿ) – 39
![ಪ್ರತ್ಯಗಾತ್ಮ ಚಿಂತನ (ನೇನಂಶಿ) – 39](https://sahityamaithri.com/wp-content/uploads/2022/05/pratyagatma-3-850x560.jpg)
ಕರೆಯದಿರೆ ಹೋಗದಿರು ಶುಭಕಾರ್ಯವೆಂದನಲು
ಪರಿಣಾಮ ರಮಣೀಯವಲ್ಲವದು ಕಾಣ
ಮರಣ ವಾರ್ತೆಯ ಕೇಳಿ ಚಣಕಾಲನಿಲ್ಲದಿರು
ಮರುಕವೇ ಕರೆಯೋಲೆ- || ಪ್ರತ್ಯಗಾತ್ಮ ||
ಕರೆಯದಿದ್ದರೂ ಕೂಡ ದಕ್ಷ ಯಜ್ಞಕೆ ತೆರಳಿ
ಕೆರಳಿ ದಾಕ್ಷಾಯಣಿಯು ಮರಣವಪ್ಪಿದಳು
ಕರೆಯದೆಯೆ ಹೋಗುವುದು ಮರ್ಯಾದೆಗದು ಕುಂದು
ನೆರೆ ವಿಚಾರಿಸಿ ನೋಡು- || ಪ್ರತ್ಯಗಾತ್ಮ ||
ಗಾಂಧಿ ನಿಧನದ ವಾರ್ತೆ ಕೇಳಿ ಕಂಗಾಲಾಗಿ
ಮಂದಿ ಲಕ್ಷಕು ಮೀರಿ ದಿಲ್ಲಿ ಸೇರಿದರು
ನೊಂದು ದರ್ಶನ ಪಡೆದು ಅಶ್ರುಸುರಿಸಿದರವರ
ನಂದು ಕರೆದವರಾರು ?- || ಪ್ರತ್ಯಗಾತ್ಮ ||
ತಂತಿಯನು ಅತಿ ಬಿಗಿದರದು ಕಡಿದು ತುಂಡಹುದು
ತಂತಿ ಸಡಿಲವ ಮಾಡೆ ನಾದ ಹೊರಬರದು
ತಂತಿ ಹದವಾಗಿರಲು ಸುಶ್ರಾವ್ಯ ಸಂಗೀತ
ತಂತಿಯಂತೀ ಒಡಲು- || ಪ್ರತ್ಯಗಾತ್ಮ ||
![](http://sahityamaithri.com/wp-content/uploads/2022/05/Nenamshi-7.jpg)
ಎನ್. ಶಿವರಾಮಯ್ಯ (ನೇನಂಶಿ)