ಪ್ರಸಾದ್ ವಶಿಷ್ಠ ನವ ಪ್ರತಿಭೆ

ಕು. ಶಿ     : ಪ್ರಸಾದ್ ರವರೆ ನಿಮ್ಮ ಹುಟ್ಟೂರು ಬಾಲ್ಯ ಹಾಗೂ ಶಿಕ್ಷಣದ ಬಗ್ಗೆ ತಿಳಿಸಿ

ಪ್ರಸಾದ್ : ನಾನು ಹುಟ್ಟಿ ಬೆಳೆದದ್ದು ಹಾಗೂ ನನ್ನ ಪಿ ಯು ಸಿ ವರೆಗಿನ ಶಿಕ್ಷಣ ಮುಗಿಸಿದ್ದು ತುಮಕೂರಿನಲ್ಲಿ. ಚಿಕ್ಕಂದಿನಿಂದ ಶ್ರೀ ಗಳ ಸಿದ್ದಗಂಗಾ ಸಂಸ್ಥೆಯಲ್ಲಿ ಕಲಿಯಲು ತುಂಬಾ ಆಸಕ್ತಿಯಿತ್ತು ನಾನಾ ಕಾರಣದಿಂದ ಆಗಿರಲಿಲ್ಲಾ  ಮುಂದೆ BE ಶಿಕ್ಷಣಕ್ಕೆ ಬೇರೆ ಕಾಲೇಜಿನಲ್ಲಿ ಸೀಟು ಸಿಕ್ಕರೂ ಶ್ರೀ ಗಳ  ಮೇಲಿನ ಪ್ರೀತಿ ಅಭಿಮಾನದಿಂದ ಅವರದೇ ಸಂಸ್ಥೆಯಲ್ಲಿ ಬಿ ಎಸ್ ಸಿ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಗ್ರಿ ಮುಗಿಸಿ ಮುಂದೆ ಪಾರ್ಟ್ ಟೈಮ್ ಕೆಲಸ ಮಾಡುತ್ತಾ MBA ಪದವೀದರನಾದೆ. ನನ್ನ ಹುಟ್ಟೂರಾದ ತುಮಕೂರು ಎಂದರೆ ನನಗೆ ಅತೀವ ಪ್ರೀತಿ ಯಾಕೆಂದರೆ ನನ್ನಲ್ಲಿ ಕಲೆಯ ಬಗ್ಗೆ ಆಸಕ್ತಿ ಹುಟ್ಟಿದ್ದು ಆ ನೆಲದ ಮಣ್ಣಿನಲ್ಲೇ ಹಾಗೂ ನನಗೆ ವಿದ್ಯೆ ಹೇಳಿಕೊಟ್ಟ ಗುರುಗಳೆಲ್ಲರೂ ಅಲ್ಲಿನವರೇ ಮತ್ತು ಅವರ ಆಶೀರ್ವಾದ ಸದಾ ನನ್ನ ಮೇಲೆ ಇರುತ್ತದೆ ಎಂದು ನಂಬಿಕೆ.

ಕು. ಶಿ     : ಚಿತ್ರರಂಗದ ಮೇಲೆ ಆಸಕ್ತಿ ಹೇಗೆ ಶುರುವಾಯಿತು? ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಚಿತ್ರರಂಗದ ನಂಟು ಇತ್ತೆ ?

ಪ್ರಸಾದ್ : ಕಲೆ ಎಂಬುದು ಪ್ರತಿ ಮಗುವಿನಲ್ಲೇ ಇರುತ್ತದೆ, ನಟಿಸುವುದು, ಹಾಡುವುದು ಚಿತ್ರ ಬಿಡಿಸುವುದು ಮುಂತಾದ ಅನೇಕ ಚಟುವಟಿಕೆಗಳಲ್ಲಿ ಆಸಕ್ತಿ ಇರುತ್ತದೆ ಅದು ಮನೆಯವರ ಹಾಗೂ ಹಿರಿಯರ ಪ್ರೋತ್ಸಾಹ ದಿಂದ ಬೆಳಕಿಗೆ ಬರುತ್ತದೆ. ನನಗೆ ಚಿಕ್ಕಂದಿನಲ್ಲೇ ಸಿನಿಮಾ ಅಂದರೆ ತುಂಬಾ ಆಸಕ್ತಿ, ಬಿಡುಗಡೆಯಾಗುತಿದ್ದ ಯಾವ ಸಿನಿಮಾವನ್ನು ನೋಡದೆ ಬಿಡುತಿರಲಿಲ್ಲ. ಸಿನಿಮಾ ನೋಡುತ್ತಿರುವಾಗಲೇ ಮುಂದಿನ ದೃಶ್ಯ ಈಗೇ ಬರುತ್ತದೆ ಎಂದು ಹೇಳಿಬಿಡುತ್ತಿದ್ದೆ ಈಗಾಗಿ ನನ್ನ ಮನೆಯವರು ನನ್ನ ಡೈರೆಕ್ಟರ್ ಎಂದೇ ರೇಗಿಸುತಿದ್ದರು. ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೃತ್ಯ, ಏಕಪಾತ್ರಭಿನಯ ಮಾಡುತಿದ್ದೆ ಇದೆಲ್ಲಕ್ಕೂ ನಮ್ಮ ಮನೆಯವರ ಪ್ರೋತ್ಸಾಹ ಸದಾ ಇರುತಿತ್ತು.

ಕು ಶಿ      : ನೀವು ಚಿತ್ರರಂಗ ಅಥವಾ ಕಿರುತೆರೆಗೆ ಬರಲು ಮಾಡಿದ ಪ್ರಯತ್ನಗಳು ಹೇಗಿತ್ತು?

ಪ್ರಸಾದ್ : ನನಗೆ ಈ ರಂಗದಲ್ಲಿ ಯಾರು ಗಾಡ್ ಫಾದರ್ ಎಂದೇನು ಇರಲಿಲ್ಲಾ ಒಂದು ದಿನ ಸ್ವಪ್ರಯತ್ನದಿಂದ ಬೆಂಗಳೂರಿಗೆ ಬಂದು ಏನು ತಿಳಿಯದೆ ಸುಮ್ಮನೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನಿಂತುಬಿಟ್ಟೆ. ಆ ದಿನ ನನ್ನ ನೆನಪಿನಲ್ಲಿ ಸದಾ ಇರುತ್ತದೆ ಮುಂದೆ ಏನು ಹೇಗೆ ಎಂದು  ಚಿಂತಿಸುತ್ತಿದ್ದ ನನಗೆ ಅಲ್ಲಿನ ಕಾವಲು ಸಿಬ್ಬಂದಿಯೊಬ್ಬರು ಏನು ಯೋಚಿಸುತ್ತ ನಿಂತಿದೀಯಪ್ಪ ಎಂದು ಕೇಳಿದರು ಆಗ ನನ್ನ ಕನಸನ್ನು ಅವರ ಹತ್ತಿರ ಹೇಳಿಕೊಂಡೆ. ಅವರು ನನಗೆ ಯಾವುದಾದರೂ ನಟನೆಗೆ ಸಂಬಂಧಪಟ್ಟ ಸಂಸ್ಥೆಯಲ್ಲಿ ಸೇರಿಕೊಳ್ಳಿ ಹಾಗೂ ತಾನಾಗಿಯೇ ಚಿತ್ರರಂಗದ ವಿವಿಧ ಜನಗಳ ಪರಿಚಯವಾಗುವುದೆಂದು ಮಾರ್ಗದರ್ಶನ ಮಾಡಿದರು. ಈಗೆ ಅವರೇ ನನ್ನ ಚಿತ್ರರಂಗದ ಪ್ರಯಾಣಕ್ಕೆ ಮೊದಲ ದಿಕ್ಸೂಚಿಯಾದರು. ಮುಂದೆ ನಟನೆಯ ಕೋರ್ಸ್ ಮಾಡುತ್ತಾ ಪಾರ್ಟ್ ಟೈಮ್ ಕೆಲಸ ಮಾಡುತ್ತಿದಾಗ ನಮ್ಮ ತುಮುಕೂರಿನ ಗುರುವೊಬ್ಬರು ಅಚಾನಕ್ಕಾಗಿ ಸಿಕ್ಕು ಅವರೊಂದು ಸೀರಿಯಲ್ ತೆಗೆಯುತ್ತಿದ್ದೂ ಒಂದು ಪಾತ್ರವನ್ನು ಮಾಡುತೀರಾ ಎಂದು ಕೇಳಿದರು. ಈಗ್ಗೆ ಹೆಣ್ಣು ಹೊನ್ನು ಮಣ್ಣು ಎಂಬ ಧಾರಾವಾಹಿಯಿಂದ ನನ್ನ ಮೊದಲ ಪ್ರವೇಶವಾಯಿತು. ಚಂದನದಲ್ಲಿ ಪ್ರಸಾರವಾದ ಈ ಧಾರಾವಾಹಿ ತುಂಬಾ ಜನಪ್ರಿವಾಯಿತು. ನಾನು ಮೊದಲು ಗುರುತಿಸಿಕೊಂಡಿದ್ದು ಚಂದನದಲ್ಲಿ ಎಂದು ಹೇಳಿಕೊಳ್ಳೋಕೆ ತುಂಬಾ ಹೆಮ್ಮೆಯಾಗುತ್ತದೆ. ನಾವು ಈಗಲೂ ಅನೇಕ ಸದಭಿರುಚಿಯ ಕಾರ್ಯಕ್ರಮಗಳನ್ನು ಮನೆ ಮಂದಿಯೆಲ್ಲಾ ಕೂತು ಚಂದನದಲ್ಲಿ ನೋಡುತ್ತೇವೆ.

ಕು ಶಿ       : ನೀವು ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ಮೊದಲ ಅನುಭವ ಹೇಗಿತ್ತು?

ಪ್ರಸಾದ್ : “ಪುಟ್ಟಗೌರಿ ಮದುವೆ” ಧಾರಾವಾಹಿಯಲ್ಲಿನ ನನ್ನ ನಟನೆ ನೋಡಿ ಸಿನಿಮಾ ನಿರ್ದೇಶಕರಾದ ಶ್ರೀ ಎಮ್ ಡಿ ಶ್ರೀಧರ್ ರವರು ತಮ್ಮ ಬುಗುರಿ ಚಿತ್ರದಲ್ಲಿ ನನಗೊಂದು ಪಾತ್ರ ಕೊಟ್ಟರು ಆನಂತರ ಶ್ರೀ  ಯೋಗರಾಜಭಟ್ ರವರ ಜೊತೆ ಸಿನಿಮಾ ಹಿನ್ನಲೆ ಕೆಲಸದಲ್ಲಿ ತೊಡಗಿಕೊಂಡೆ ಅವರು ನಂತರ ತಮ್ಮ “ಮುಗುಳುನಗೆ” ಸಿನಿಮಾದಲ್ಲಿ ಮಂಡ್ಯದ ಹುಡುಗನ ಪಾತ್ರವನ್ನು ಕೊಟ್ಟರು. ಹೀಗೆ ಹಲವಾರು ಸಿನಿಮಾದಲ್ಲಿ ಅವಕಾಶ ಹುಡುಕಿಕೊಂಡು ಬಂದಿತು.

ಕು ಶಿ        : ಬೆಳ್ಳಿತೆರೆ ಹಾಗೂ ಕಿರುತೆರೆ ನಿಮಗೆ ಇವೆರಡರಲ್ಲಿ ಯಾವುದು ಮುಖ್ಯ ಅನಿಸುತ್ತದೆ?

ಪ್ರಸಾದ್ : ಕಲಾವಿದರಿಗೆ ಈ ಎರಡು ರಂಗಗಳು ತುಂಬಾ ಮುಖ್ಯ ಯಾಕೆಂದರೆ ಎರಡರಲ್ಲೂ ಮಾಡೋದು ನಟನೆಯೇ ಅವಕಾಶಗಳಿಗಾಗಿ ದೊಡ್ಡ ಪೈಪೋಟಿಯೇ ಇರುವಾಗ ಎಲ್ಲಿ ನಮಗೆ ಅವಕಾಶ ಸಿಗುತ್ತದೋ ಅಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಸಿದ್ದರಿರಬೇಕು.

ಕು ಶಿ       : ಈ ಎರಡು ರಂಗದಲ್ಲಿ  ಕಂಠದಾನ ಕಲಾವಿದರ ಪ್ರಾಮುಖ್ಯತೆ ಹೇಗೆ?

ಪ್ರಸಾದ್ : ಎಷ್ಟೋ ಮುಖ್ಯ ಕಲಾವಿದರ ನಟನೆಗೆ ಕಂಠದಾನ ಕಲಾವಿದರು ಧ್ವನಿಯಾಗಿ ಅವರ ಯಶಸ್ಸಿಗೆ ಕಾರಣರಾಗಿದ್ದಾರೆ ನಟನೆಗೆ ಜೀವ ಕೊಡೊ ಅವರು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಬಹು ಮುಖ್ಯಪಾತ್ರದಾರಿಗಳಾಗಿದ್ದಾರೆ.

ಕು ಶಿ       : ಡಬ್ಬಿಂಗ್ ವಿಷಯವಾಗಿ ಏನನ್ನಾದರೂ ಹೇಳಲು ಇಷ್ಟಪಡುವಿರಾ?

ಪ್ರಸಾದ್ : ಅವಶ್ಯವಾಗಿ, ಈ ಕರೋನ ಕಾರಣದಿಂದಾಗಿ ಎಷ್ಟೋ ಕಲಾವಿದರು ಹಾಗೂ ಕಾರ್ಮಿಕರಿಗೆ  ದುಡಿಮೆ ಇಲ್ಲದಂತಾದಾಗ ಡಬ್ಬಿಂಗ್ ಆಸರೆಯಾಗಿ ನೇರವಾಗಿದೆ ಆದರೆ ಅದು ಶಾಶ್ವತವಲ್ಲ ಮುಂದೆ ಎಲ್ಲಾ ತೆರವಾದಾಗ ಡಬ್ಬಿಂಗ್ ಸಂಸ್ಕೃತಿ ಸ್ಥಳೀಯ ಸಂಸ್ಕೃತಿಗಳಿಗೆ ಮಾರಕವಾಗದಿದ್ದರೆ ಅಷ್ಟೇ ಸಾಕು.

ಕು ಶಿ      : ನೀವು ಸದ್ಯಕ್ಕೆ ಯಾವ ಚಲನಚಿತ್ರದಲ್ಲಿ ನಟಿಸುತ್ತಿದೀರಾ?

ಪ್ರಸಾದ್ : ಸೈನೆಡ್ ಹಾಗೂ ಅಟ್ಟಹಾಸ ಖ್ಯಾತಿಯ AMR ರಮೇಶ್ರವರ ವೀರಪ್ಪನ್ ಕುರಿತಾದ ವೆಬ್ ಸೀರೀಸ್ ನಲ್ಲಿ ಮುಖ್ಯ ಎಸಿಪಿ ಪೊಲೀಸ್ ಪಾತ್ರದರಿಯಾಗಿ ನಟಿಸುತ್ತಿದ್ದೇನೆ ಸಂತಸದ ವಿಷಯವೇನೆಂದರೆ ಸುನಿಲ್ ಶೆಟ್ಟಿ, ಸುರೇಶ ಒಬಿರೋಯ್, ವಿವೇಕ್ ಒಬಿರೋಯ್, ಮೋಹಿತ್ ರೈನಾ ರಂತ ನಟದಿಗ್ಗಜರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದಾರೆ ಇವರುಗಳ ಸರಿಸಮಾನವಾಗಿ ನಟಿಸುವುದು ನಿಜಕ್ಕೂ ನನಗೆ ಅದ್ಬುತ ಅವಕಾಶ ಹಾಗೂ ಈ ಅವಕಾಶ ಮಾಡಿಕೊಟ್ಟ AMR ರಮೇಶ್ ರವರಿಗೆ ನಾನು ಚಿರಋಣಿ.

ಕು ಶಿ       : ಹೆಚ್ಚು ಕಡಿಮೆ ಮುಕ್ಕಾಲು ವರ್ಷದ ನಂತರ ಚಿತ್ರಮಂದಿರಗಳು ತೆರೆದಿದೆ ಹಾಗೂ ಆಕ್ಟ್ 1978 ಚಿತ್ರ ಬಿಡುಗಡೆಯಗಿದೆ ಇದರ ಬಗ್ಗೆ ಏನು ಹೇಳಲು ಇಷ್ಟಪಡುತ್ತೀರಾ?

ಪ್ರಸಾದ್  : ಚಿತ್ರಮಂದಿರಗಳು ತೆರೆದು ಆಕ್ಟ್ 1978 ಚಿತ್ರ ಬಿಡುಗಡೆಯಗಿರುವುದು ನಿಜಕ್ಕೂ ಸಂತಸದ ವಿಷಯ. ಈ ಚಿತ್ರಕ್ಕೆ ನಿರ್ದೇಶಕರಾದ ಮನ್ಸೂರೆಯವರ ತಂಡ ನಿಜಕ್ಕೂ ಕಷ್ಟ ಪಟ್ಟು ಅದ್ಭುತವಾಗಿ ಚಿತ್ರವನ್ನು ತೆರೆಯ ಮೇಲೆ ತಂದಿದ್ದಾರೆ ಮತ್ತೆ ಒಳ್ಳೆಯ ವಿಮರ್ಶೆಗಳು ಬರುತ್ತಿವೆ. ಪ್ರೇಕ್ಷಕ ಪ್ರಭುಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದು ವೀಕ್ಷಿಸಿದರೆ ನಿಜವಾಗಲೂ ಚಲನಚಿತ್ರೋದ್ಯಮ ಚೇತರಿಸಿಕೊಳ್ಳುತ್ತದೆ ಹಾಗೂ ಸಾಲಿನಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆಗೆಗೊಳಿಸಲು ಕಾಯುತ್ತಿರುವ ನಿರ್ಮಾಪಕರಿಗೆ ಹೆಚ್ಚು ಧೈರ್ಯ ಬರುತ್ತದೆ.

ಕು ಶಿ       : ಚಿತ್ರರಂಗದಲ್ಲಿನ ನಿಮ್ಮ ಮುಂದಿನ ಕನಸುಗಳೇನು?

ಪ್ರಸಾದ್  : ಕಲಾವಿದನಾಗಿ ಇದುವರೆಗೂ ಯಾರು ಮಾಡದ ಪಾತ್ರದಲ್ಲಿ ಅಭಿನಯಿಸಬೇಕು ಎಂಬುದೇ ನನ್ನ ಬಹು ದೊಡ್ಡ ಕನಸು ಈ ಕನಸು ನನಸಾದರೆ ನಿಜಕ್ಕೂ ಅದು ನನ್ನ ವೃತ್ತಿರಂಗದಲ್ಲಿಯೇ ಒಂದು ಅವಿಸ್ಮರಣೀಯ.

 ಕು ಶಿ      : ಖಂಡಿತವಾಗಿಯೂ ಆ ತಾಯಿ ಭುವನೇಶ್ವರಿಯು ನಿಮ್ಮ ಆಸೆ ಈಡೇರಿಸುತ್ತಾಳೆ ಸದಾ ಆಶಾವಾದಿಯಾಗಿ ಇರಿ ಮತ್ತು ನಿಮ್ಮ ಮುಂದಿನ ವೆಬ್ ಸೀರೀಸ್ ನಲ್ಲಿ ಒಬ್ಬ ಸ್ಫೂರುದ್ರೂಪಿ ಪೊಲೀಸ್ ಅಧಿಕಾರಿಯಾಗಿ ನಿಮ್ಮನ್ನು ನೋಡಲು ಇಚ್ಛೆಸುತ್ತೇವೆ ಹಾಗೂ ಆ ಚಿತ್ರವೂ ಮತ್ತೂ ನಿಮ್ಮ ನಟನೆಯು ಯಶಶ್ವಿಯಾಗಲೆಂದು ನಮ್ಮ ಆಕೃತಿ ಕನ್ನಡದಿಂದ ಶುಭ ಹಾರೈಸುತ್ತೇವೆ ಧನ್ಯವಾದಗಳು.

Related post

1 Comment

  • anchored by a multi level mansion property complete he new address will not become active until confirmed classed as employees anchored by a multi level mansion property complete he new address will not become active until confirmed classed as employees .

Comments are closed.