ಪ್ರಾಕೃತಿಕ ವೈಪರೀತ್ಯ

ಇತ್ತೀಚೆಗೆ ಯಾಕೋ ಮಳೆಗಾಲ ಯಾವಾಗ ಶುರು, ಯಾವಾಗ ಕೊನೆ ಎಂಬುವುದೇ ಮರೆತು ಹೋಗುವಂತಿದೆ. ಬರಬೇಕಾದ ಕಾಲದಲ್ಲಿ ಮಳೆ ಬರುವುದಿಲ್ಲ. ಯಾವಾಗೆಂದರೆ ಆವಾಗ ದಿಢೀರನೆ ಬಂದು ಬಿಡುತ್ತಾ ಇದೆ. ಅದರಿಂದಾಗುವ ಅವಾಂತರ ಹೇಳುವುದೇ ಬೇಡ. ನಾವು ಸಣ್ಣವರಿರುವಾಗ ಶಾಲೆಗಳಲ್ಲಿ ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಎಂದು ಇಷ್ಟಿಷ್ಟು ತಿಂಗಳುಗಳು ಎಂದು ವಿಂಗಡಿಸಿ ಹೇಳುತ್ತಾ ಇದ್ದರು. ಆದರೆ ಈಗಿನ ಮಕ್ಕಳಿಗೆ ತಿಳಿಸುವಾಗ ಶಿಕ್ಷಕರು ಕೂಡಾ ಪರದಾಡಬೇಕಾಗುತ್ತದೆನೋ. ಹಾಗಿದೆ ನಮ್ಮ‌ ಮಳೆಗಾಲ.

ಸಾಂದರ್ಭಿಕ ಚಿತ್ರ

ಇದರ ಕಾರಣಗಳ ಜಾಡನ್ನು ಹಿಡಿದಾಗ ನಮಗೆಲ್ಲಾ ಗೊತ್ತಾಗುವ ವಿಚಾರವೆಂದರೆ, ಇದೆಲ್ಲಾ ಪ್ರಕೃತಿ ವೈಪರಿತ್ಯಗಳಿಂದ, ಹವಾಮಾನ ಮೈಫಲ್ಯತೆಯಿಂದ ಉಂಟಾಗುವ ಮಳೆಗಳು ಎಂದು. ಹಾಗಾದರೆ ಇದಕ್ಕೆ ನಾವು ಕಾರಣವೇ ಎನ್ನುವುದಾದರೆ, ಹೌದು. ಇದಕ್ಕೆ ಮೂಲ ಕಾರಣ ನಾವೆ. ನಾವು ಅಭಿವೃಧ್ದಿ ಎಂಬ ಕಲ್ಪನೆಯೊಂದಿಗೆ ಪ್ರಕೃತಿಗೆ ವಿರುದ್ಧವಾದ ಕೆಲಸಗಳನ್ನು ಮಾಡುತ್ತಿದ್ದೇವೆ. ಹೀಗೆ ಮುಂದುವರಿದರೆ ಮುಂದೊಂದು ದಿನ ನಮ್ಮ ಕಣ್ಣೆದುರು ಇದಕ್ಕಿಂತ ಭೀಕರತೆಯ ದೃಶ್ಯಗಳನ್ನು ಕಾಣಬೇಕಾದಿತು!. ಹಳ್ಳಿಯ ಜೀವನ ಬೇಡವಾಗಿದೆ. ನಗರೀಕರಣ ಜೀವನಕ್ಕೆ ಅವಲಂಬಿತವಾಗಿದ್ದೇವೆ. ಮರಗಳು ಬೇಡವಾಗಿದೆ. ಕೆರೆಗಳು ಮುಚ್ಚಿಹೋಗಿವೆ. ಅವುಗಳ ಮೇಲೆ ಗಗನ ಚುಂಬಿ ಕಟ್ಟಡಗಳು ಮೇಲಕ್ಕೇಳುತ್ತಿವೆ.

ಅಭಿವೃದ್ಧಿ ಎಂಬ ನಾಮಫಲಕದೊಂದಿಗೆ ಮರಗಳ ಮಾರಣ ಹೋಮ. ಬಿಲ್ಡರುಗಳ ಹಣದ ಆಮೀಷಕ್ಕೆ ಕೆರೆಗಳು ಹಾಗು ರಾಜಕಾಲುವೆಗಳ ಬಲಿ. ಇದೇ ತರಹ ಒಂದೊಂದೆ ಬಲಿಯಾಗುತ್ತಲೇ ಹೋದಲ್ಲಿ ಮುಂದೊಂದು ದಿನ ಪ್ರವಾಹ ಭೂಕಂಪಗಳಿಗೆ ಮಾನವ ಜೀವನವೇ ಬಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನೀರಿಗೆ ತನ್ನದೇ ಆದ ನೀರಿನ ಹರಿವು ಇರುತ್ತದೆ. ಅದನ್ನು ಮುಚ್ಚಿದಾಗ ನೀರು ಹೋಗುವುದೆಲ್ಲಿ. ಅದಕ್ಕೆ, ಅದು ಮನುಷ್ಯನಿಗೆ ತೋರಿಸುವ ಸಲುವಾಗಿಯೇ ಪ್ರವಾಹದ ಮುಖೇನ ಒಳ ನುಗ್ಗಿ ತನ್ನ ಅಸ್ತಿತ್ವವನ್ನು ತೋರಿಸಿಕೊಡುತ್ತದೆ. ಆದರೆ, ಅದರ ಭೀಕರತೆಗೆ ತೊಂದರೆ ಅನುಭವಿಸುವವರು ಮಾತ್ರ ಬಡವರು ಹಾಗು ಮಧ್ಯಮ ವರ್ಗದವರು.

ಪ್ರಕೃತಿಯಲ್ಲಿರುವ ಸಕಲ ಜೀವರಾಶಿಗಳಲ್ಲಿ ಮನುಷ್ಯನೇ ತುಂಬಾ ಸ್ವಾರ್ಥಿ. ಪ್ರಕೃತಿಯಿಂದ ಎಲ್ಲಾ ಉಪಯೋಗ ಪಡೆಯುತ್ತಾನೆ ಬದಲಾಗಿ ಪ್ರಕೃತಿಯೊಂದಿಗೆ ನೀಚತನ ತೋರಿಸುತ್ತಾನೆ. ಮಳೆ ಇದ್ದರೇ ಬೆಳೆ. ಕಾಲಕಾಲಕ್ಕೆ ಸರಿಯಾಗಿ ಮಳೆ ಬಂದಾಗ ಬೆಳೆಯು ಚೆನ್ನಾಗಿರುತ್ತದೆ. ಅಕಾಲಿಕ ಮಳೆಯಿಂದಾಗಿ ಬೆಳೆದಂತಹ ಬೆಳೆಯು ನೀರಿನ ಪಾಲಾಗಿ ರೈತ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ದನಕರುಗಳು ನೀರಿನಲ್ಲಿ ತೇಲಿ ಹೋಗುವುದನ್ನು ನೋಡಿದಾಗ, ಮನೆ ಮಠಗಳನ್ನು ಕಳೆದುಕೊಂಡ ಜನರನ್ನು ನೋಡುವಾಗ ಕರುಳು ಹಿಂಡಿ ಬರುವುದು. ಮುಂದೇನು ಎನ್ನುವ ಪರಿಸ್ಥಿತಿ ಅಲ್ಲಿನ ಜನಗಳದು. ಬೇರೆಯವರಿಗೆ ಕೈ ಒಡ್ಡಿ ಬದುಕುವಂತಹ ಪರಿಸ್ಥಿತಿ. ಮುಂದೆ ಅದನ್ನು ಸಮ ಸ್ಥಿತಿಗೆ ತರಲು ಅವರಿಗೆ ವರುಷಗಳೇ ಬೇಕು. ಯಾರೋ ಮಾಡುವ ತಪ್ಪಿಗೆ ಯಾರೋ ಶಿಕ್ಷೆ ಅನುಭವಿಸುವಂತಾಗಿದೆ.

ಸಾಂದರ್ಭಿಕ ಚಿತ್ರ

ಪ್ರಕೃತಿಯೊಂದಿಗಿನ ನೆಲ – ಜಲ – ಕಾಡು ಇವುಗಳಿಗೆ ನಮಗಿಂತ ಹೆಚ್ಚು ಬದುಕುವ ಅರ್ಹತೆ ಇರುವುದು. ಹಾಗಾಗಿ ಅದನ್ನು ಅದರ ಪಾಡಿಗೆ ಬದುಕಲು ಬಿಟ್ಟಾಗ ಈ ಪ್ರಕೃತಿ ವಿಕೋಪಗಳಿಗೆ ಗುರಿಯಾಗದೆ ಇರಬಹುದು. ಹಣ ಅಸ್ತಿ ಅಂತಸ್ತು ಎಂಬ ಹಮ್ಮಿನಲ್ಲಿ ಬದುಕುವ ಮನುಷ್ಯ ಪ್ರಕೃತಿ ವಿಕೋಪಕ್ಕೆ ಗುರಿಯಾದಾಗ ತನ್ನ ಎಲ್ಲಾ ಅಸ್ತಿ ಪಾಸ್ತಿ ನೀರಿನಲ್ಲಿ ಕೊಚ್ಚಿ ಹೋಗುವುದನ್ನು ನೋಡಿಕೊಂಡು ಜೀವ ಉಳಿಯಿತಲ್ಲ ಎಂಬ ನಿಟ್ಟುಸಿರು ಬಿಡುವಂತಾಗಿದೆ.

ರೈತನ ಕಾಯಕ ಹವಾಮಾನಕ್ಕನುಗುಣವಾಗಿ ಶುರುವಾಗುತ್ತದೆ. ಪ್ರಕೃತಿ ವೈಫಲ್ಯದಿಂದ ರೈತನ ಜೀವನ ದುಸ್ತರವಾಗಿದೆ. ಅನ್ನವಿಲ್ಲದೆ ಬದುಕಿಲ್ಲ. ಅನ್ನವನ್ನು ಕೊಡುವ ರೈತನ ಜೀವನ ಅಧೋಗತಿಯತ್ತ ಸಾಗುತ್ತಿದೆ. ರೈತ ದೇಶದ ಬೆನ್ನುಲುಬು ಎಂಬುವುದು ಬರಿ ಬೂಟಾಟಿಕೆಯ ಮಾತಾಗಿದೆ. ಎಲ್ಲವು ರಾಜಕೀಯ ಪ್ರೇರಿತವಾಗಿದೆ. ರೈತನನ್ನು ಹೀಗೆಯೆ ಕಡೆಗಣಿಸಿದರೆ ತಿನ್ನಲು ಪರದಾಡುವಂಥ ಪರಿಸ್ಥಿತಿ ಬಂದೊದಗಬಹುದು. ಮಳೆಗಾಗಿ ಯಾವುಯಾವುದಕ್ಕೋ ಮದುವೆ ಮಾಡುವ ಬದಲು ರೈತನೊಂದಿಗೆ ಕೈಜೋಡಿಸಿ ಹೊಲಗಳನ್ನು ಕೆರೆಗಳನ್ನು, ಕಾಡುಗಳನ್ನು ಸಂರಕ್ಷಿಸೋಣ. ಪ್ರಕೃತಿಯ ಒಡಲನ್ನು ಬರಿದು ಮಾಡದಿರೋಣ.

ಸಾಂದರ್ಭಿಕ ಚಿತ್ರ

ಪ್ರಕೃತಿ ವಿಕೋಪಕ್ಕೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿನೋ ಪ್ರತಿಯೊಬ್ಬರೂ ಕಾರಣರು. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಇಂದು ಬೇರೆಯವರಿಗೆ ಆಗುವ ತೊಂದರೆಗಳನ್ನು ಒಬ್ಬರಿಂದ ಒಬ್ಬರಿಗೆ ಮೊಬೈಲ್ ಗಳ ಮೂಲಕ ಕಳುಹಿಸಿ ಅಯ್ಯೋ ಪಾಪ ಎನ್ನುವ ನಾವು ಮುಂದೊಂದು ದಿನ ಬರುವ ಪ್ರವಾಹದೊಡನೆ ನಾವೇ ಕೊಚ್ಚಿ ಹೋಗಬಹುದು. ಕಾಡಿದ್ದರೆ, ನಾಡು. ಕಾಡಿದ್ದರೆ, ಸಕಾಲಕ್ಕೆ ಮಳೆ-ಬೆಳೆ. ನಾಡಿನ ಅಭಿವೃದ್ಧಿಗೆ ಕಾಡಿನ ಬಲಿದಾನ ಬೇಡವಾಗಿದೆ.
ಪ್ರಕೃತಿಯೊಡನೆ ನಮ್ಮ ಬದುಕು. ನಮ್ಮ ದೇಹವು ಪಂಚಭೂತಗಳಿಂದ ಆಗಿವೆ. ಹಸಿರಿನೊಂದಿಗೆ ನಮ್ಮ ಉಸಿರಿದೆ. ನೀರು ನಮ್ಮ ಜೀವನಾಡಿ. ನಾವು ಪ್ರಕೃತಿಗೆ ಕೃತಘ್ನರಾಗಿರಬೇಕು. ರೈತರನ್ನು ಗೌರವಿಸೋಣ.
‘’ಅನ್ನದಾತೋ ಸುಖಿನೋಭವಂತು”

ಸೌಮ್ಯ ನಾರಾಯಣ್

Related post

13 Comments

  • Nice

  • ಹೌದು ಮಾನವ ಮಾಡುವ ಕೆಲಸಕ್ಕೆ ಸಿಕ್ಕಿದ ಫಲ ಇದು.
    ಅದ್ಬುತವಾಗಿ ಮೂಡಿ ಬಂದಿದೆ.

  • ಉತ್ತಮ ಬರಹ…

  • Nice sis

  • Nice

  • Very good writer.. good thinking..

  • ಧನ್ಯವಾದಗಳು. ನಿಮ್ಮ ಈ ಅನಿಸಿಕೆಗೆ ಹಾಗು ಪ್ರೋತ್ಸಾಹಕ್ಕೆ.

  • ತುಂಬಾ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ.

  • ತುಂಬಾ ಧನ್ಯವಾದಗಳು. ಬರಹ ಓದಿ ಅಭಿಪ್ರಾಯ ತಿಳಿಸಿದ್ದಕ್ಕಾಗಿ .

  • ಧನ್ಯವಾದಗಳು. ನಿಮ್ಮ ಪ್ರೋತ್ಸಾಹಕ್ಕಾಗಿ.

  • ಧನ್ಯವಾದಗಳು ಸೌಮ್ಯ. ನಿಮ್ಮ ಪ್ರೋತ್ಸಾಹಕ್ಕಾಗಿ.

  • Thank you for your support

  • ಸೊಗಸಾದ ಬರಹ ಮೇಡಂ.

    ಇಂದಿನ ಈ ಪ್ರಕೃತಿ ವೈಪರೀತ್ಯಕ್ಕ ಪರೋಕ್ಷವಾಗಿ ನಾವು ಸಹ ಹೊಣೆಗಾರರು.

    ಮುಂದಿನ ಬರಹಕ್ಕಾಗಿ ಕಾದಿದ್ದೇವೆ

Leave a Reply

Your email address will not be published. Required fields are marked *