ಬದುಕು ಮನ್ವಂತರ

ಬದುಕು ಮನ್ವಂತರ

ಆಕಸ್ಮಿಕ ತಿರುವಿನಲ, ಅನಿರೀಕ್ಷಿತ ಕೋನಗಳಿಂದ
ಅಚರಿಗಳ ತೂರುವ ಈ ಬದುಕಿನಲಿ ಒ೦ದಿಷ್ಟು
ಜಾಗರೂಕತೆಯಿರಬೇಕಿದೆ ;

ಬಾಳಿನ ಸಮಸ್ಯೆಗಳಿಗೆ ನಿಶ್ಚಿತ ಪರಿಹಾರವಿಲ್ಲ
ದಾರಿಯ ಅನುಭವ, ಅನುಭಾವದಲ್ಲಿನಾವೇ
ಅರಿತುಕೊಳ್ಳಬೇಕಿದೆ:

ನೋವನಗಿದು ನು೦ಗಿಯೂ, ಬದುಕೊಮೆಮ್ಮೆ ಕರುಣೆ
ತೋರಿ ಎಸೆವ ಹರುಕು ಹಗವ ಜಗ್ಗಿ ಹಿಡಿಯುತ್ತಾ
ಮತ್ತೆ, ಮತ್ತೆ ಮೇಲೆ ಜೀಕಬೇಕಿದೆ;

ಎದೆಯಾಳದ ಬಿಕ್ಕುಗಳಿಗೆ ಒಮೊಮ್ಮೆ ಬೀಗಿಕ್ಕಿ
ನಗುಮೊಗವ ಧರಿಸುತ್ತಾ ಜಗದ ನಿಜ ನಗುವಿನ
ಜಾಡನ್ನರಸಿಬಿಡಬೇಕಿದೆ ;

ಬೆ೦ಕಿಗೆ ಕರಗುವ, ಅರಗಿನ ಅರಮನೆಯಂತಿರುವ
ಈ ಬದುಕು ತಾ ಕರಗುವ ಮುನ್ನ ನಗುವ ಹಂಚಿ,
ಪ್ರೀತಿಯ ಪಡೆಯಬೇಕಿದೆ ;

ಹುಚ್ಚುಚ್ಚು ಭಾವುಕತೆ, ಕಪಟ ಭರವಸೆಯ,
ಕನಸು- ಸಾರವಿರದ, ಕಗ್ಗತ್ತಲ ಕಾಡು ಹಾದಿಯ
ನಾಜೂಕಾಗಿ ಸವೆಸಬೇಕಿದೆ!

ಕಾಲವೆಂಬ ಮರಳ ಕಣವ ಅಂಗೈಲಿ ಬಿಗಿ ಹಿಡಿದು
ಕಣಕಣವನೆಣಿಸುತ್ತಾ ಜಾರುವ ಸಮಯದೊಡನೆ
ನೆನಪುಗಳ ಕಾಪಿಡಬೇಕಿದೆ

ಅನಿವಾರ್ಯವಾದ ಅಗಲಿಕೆಯ ವಾಸ್ತವವನರಿತು
ಪ್ರಬುದ್ದತೆಯ ಮೆರೆದು ಪಟ್ಟು ಬಿಡದೆ, ಜೀವನದ
ಪಟ್ಟುಗಳ ಕಲಿಯಬೇಕಿದೆ!

ಬದುಕೇ ನಿನ್ನಲ್ಲೆಂತಾ ಮುನಿಸು, ನೀನಾರಿಗೆ
ಚಿರಸಂಗಾತಿ ? ದೊರೆತ ಕಾಲವ ಮನ್ವಂತರವೆಂದೆಣಿಸಿ
ಬಾಳಿ ಬದುಕಬೇಕಿದೆ!!

ಶ್ರೀವಲ್ಲಿ ಮಂಜುನಾಥ

Related post

Leave a Reply

Your email address will not be published. Required fields are marked *