ಭೇಟಿ

ಹೊಂಗನಸ ಹಾದಿಯಲಿ
ಹಾದು ಹೋಗುವ ತವಕ,
ತಡೆಯಾಗದಿರಿಯೆನಗೆ
ಮನದ ಭಾವಗಳೆ;

ಆಗು-ಹೋಗುಗಳೆಡೆಗೆ
ಗಮನವೆನಗಿಂದಿಲ್ಲ,
ಗುರಿಯೊಂದೇ ನನ್ನ
ಕಣ್ಮುಂದೆಯಿಹುದು ;

ದೂರ ದೂರದಲಿರುವ
ಬೆಳಕಿನೋಕುಳಿಯೀಗ,
ಮಾತಿರದೆ ಮೌನದಲೇ,
ನನ್ನ ಸೆಳೆಯುತಿದೆ;

ಅಡೆತಡೆಗಳಾವುದೂ
ನನಗೆ ತಡೆಯಾಗದು,
ಧ್ಯಾನಸ್ಥ ಮನಕಾವ
ಮಸುಕು ಮುಸುಕದು!

ಹೋಗಿ ಸೇರುವೆನಲ್ಲಿ
ನೆಲಮುಗಿಲಿನಂಚಿನಲಿ,
ಸಾಗರನು ಆಗಸವ
ಸಂಧಿಸುವ ಸಮಯದಿ!

ಶ್ರೀವಲ್ಲಿ ಮಂಜುನಾಥ
ಬೆಂಗಳೂರು

Related post

Leave a Reply

Your email address will not be published. Required fields are marked *