ಮಧು ಬನದೊಲೊಮ್ಮೆ

ಮಧು ಬನದೊಲೊಮ್ಮೆ

ಮಧು ಬನದೊಲೊಮ್ಮೆ

ಶೀರ್ಷಿಕೆ ಕಣ್ಣಾಡಿಸಿದರೆ ಸಾಕು ಬಾಯಲ್ಲಿ ನೀರೂರುತ್ತದೆ!!
ಅಂತೆಯೇ ಈ ಕವನ ಸಂಕಲನ …ಪಂಚಾಮೃತವ ಸವಿದಷ್ಟೇ ..ಅಲ್ಲಲ್ಲಾ..ಕುಡಿದಷ್ಟೇ ಮುದವ ನೀಡುತ್ತದೆ
ಪ್ರತಿ ಕ್ಷಣ ಪ್ರತಿ ನಿಮಿಷ…ಪ್ರತಿ ಕವನ!!

ಶ್ರೀಯುತ ನರಹರಿ ಕರಣೀಕರು,
ವೃತ್ತಿಯಲ್ಲಿ ಪುರೋಹಿತರು,
ಪ್ರವೃತ್ತಿ ಹತ್ತು ಹಲವು !

ಆಗಮಿಕರು,ಶಾಸ್ತ್ರಜ್ಞರು, ಸಂಸ್ಕೃತ ಪಂಡಿತರು, ವೇದಾಧ್ಯಯನ ಶೀಲರು, ಜ್ಯೋತಿಷ್ಯ ಶಾಸ್ತ್ರ ನಿಪುಣರು, ಕವಿಗಳು, ಸಾಹಿತಿಗಳು, ಒಳ್ಳೆಯ ವಿಮರ್ಶಕರು, ಎಲ್ಲಕ್ಕಿಂತ ಮಿಗಿಲಾಗಿ ಸಜ್ಜನರು, ಸಹೃದಯರು, ಸ್ನೇಹ ಸಂಪನ್ನರು.

ಈ ಕವನ ಸಂಕಲನ ಅವರ ಪ್ರತಿಭೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.

ಇದರಲ್ಲಿ ಏನಿಲ್ಲಾ ಎಂದು ಹುಡುಕುವಂತೆ ಆಗುತ್ತದೆ ಸಾಹಿತ್ಯಾಭಿಮಾನಿಗಳಿಗೆ.

ಎಲ್ಲಾ ರೀತಿಯ ಸಾಹಿತ್ಯ ಸಂಪತ್ತನ್ನು ಇಲ್ಲಿ ನಮಗೆ ತುಂಬಿ ಕೊಟ್ಟಿದ್ದಾರೆ.

ಭಕ್ತಿ ಪ್ರಧಾನವಾದ ಪದ್ಯಗಳು ಅಥವಾ ಭಜನೆಗಳು, ಪ್ರಕೃತಿಯ ಕಾಳಜಿ, ಪ್ರೇಮ ಕವನ,ರಾಧಾ ಮಾಧವರ ಸಲ್ಲಾಪದ ಗೀತೆಗಳು, ಅಯೋಧ್ಯೆಯ ಬಗ್ಗೆ ಗೀತಾಸರಣಿ, ಅಷ್ಟಕಗಳು, ಅಕ್ಷರ ಸ್ತವಗಳು, ಭಾಮಾ ಪ್ರಲಾಪ, ನಾರದ ಗೀತೆ, ದೇಶ ಭಕ್ತಿ ಗೀತೆಗಳು, ಗಡಿಯಲ್ಲಿ ಕಾಯುವ ನಮ್ಮ ಸೈನಿಕರ ಬಗ್ಗೆ ಕವನಗಳು, ಮಾತೆಯ ಮಹತ್ವ, ಮಹಾಭಾರತ ಪಾತ್ರಗಳ ಬಗ್ಗೆ, ಗುರುವಿನ ಐತಿಹ್ಯ, ವಿರಹದ ಗೀತೆಗಳು, ಸಾಮಾಜಿಕ ಕಳಕಳಿಯ ಬಿಂಬಿಸುವ ಕವನಗಳು, ಕೃಷ್ಣ, ಹನುಮ, ವಿನಾಯಕ, ರಾಮ, ಸೂರ್ಯ, ಚಂದ್ರ, ದತ್ತಾತ್ರಿ,…ಬದುಕಿಗೆ ಪೂರಕವಾದ ಹಲವಾರು ಕವನಗಳು..
ಹೀಗೆ ಎಲ್ಲಾ ವಿಚಾರ ವಿಷಯಗಳ ಬಗ್ಗೆ ಬಹಳ ಆಸ್ಥೆಯಿಂದ ಅಷ್ಟೇ ಪರಿಣಾಮಕಾರಿಯಾಗಿ ಕವನಗಳನ್ನು ಶ್ರೀಯುತರು
ನಮಗೆ ಪ್ರೀತಿಯಿಂದ ಕೊಟ್ಟಿದ್ದಾರೆ.

ಬಹುತೇಕ ಎಲ್ಲಾ ಕವನಗಳನ್ನೂ ಪ್ರಾಸ ಬದ್ಧವಾಗಿ ಹಾಗೂ ಛಂದೋ ಬದ್ಧವಾಗಿ ರಚಿಸಿ ಹಾಡುಗಾರರಿಗೆ ಒಮ್ಮೆ ಹಾಡಿಯೇ ಬಿಡೋಣ ಅನ್ನುವಂತೆ ಮಾಡಿದ್ದಾರೆ.

ಭಾಷಾ ಪ್ರಯೋಗ ಅದ್ಭುತ …ಮೊದಲ ಸಂಕಲನ ಎಂದರೆ ಅಚ್ಚರಿ ಉಂಟುಮಾಡುತ್ತದೆ.

ನುರಿತ ತಜ್ಞರೂ ಬಳಸದ ಅದೆಷ್ಟೋ ಶಬ್ದಗಳು ನಮಗೆ ಈ ಕವನಗಳಲ್ಲಿ ಲಭ್ಯವಾಗುತ್ತದೆ.

ಮುಖ ಪುಟ ನೋಡಿದರೆ ಸಾಕು….ಒಮ್ಮೆ ಪುಸ್ತಕ ತಿರುವಿ ನೋಡುವ ಮನಸ್ಸು ಖಂಡಿತಾ ಮೂಡುತ್ತದೆ.

ಹರಿ ಹರ ಒಟ್ಟಿಗೇ ಇದ್ದು ಕೊಳಲು ಹಾಗೂ ಡಮರುಗ ದೊಂದಿಗೆ ನರ್ತನ ಮಾಡುತ್ತಿರುವ ದೃಶ್ಯ…
ಅದೇ ಕವನ ಕಾವ್ಯವಾಗಿ ಸಂಕಲನದಲ್ಲಿ ಅರಳಿನಿಂತು ಆಕರ್ಷಿಸುತ್ತಿದೆ.

ಈ ಪುಸ್ತಕದ ಬಗ್ಗೆ ಎಷ್ಟು ಹೇಳಿದರೂ ಅದು ಮುಗಿಯದ ಮಾತು!

ಮಧುಬನದಲ್ಲಿ ಒಮ್ಮೆ ಅಡ್ಡಾಡಿ ಬರೋಣ ಬನ್ನಿ

ವಿನಾಯಕ ಸ್ತುತಿ…

ಸಂಕಲನವು ನಿರ್ವಿಘ್ನವಾಗಿ ಸಂಪನ್ನಗೊಳ್ಳಲಿ ಎಂಬ ಮಧುರ ಭಾವದಿಂದ ಹಾಗೂ ಜಗದ ಪ್ರತಿಯೊಂದು ಜೀವಿಯನ್ನೂ ರಕ್ಷಣೆ ಮಾಡಿ ಸಲಹು ಗಜಾನನ, ಕರಿಮುಖ, ಆದಿಪೂಜಿತ, ಗಜಮುಖ, ಪಾರ್ವತೀಸುತ, ದುಷ್ಠ ಶಿಕ್ಷಕ, ಶಿಷ್ಟ ರಕ್ಷಕ ಎಂದು ಸ್ತುತಿ ಮಾಡಿರುವ ಭಕ್ತಿ ಗೀತೆ.

ಶಾರದಾಸ್ತವ, ಕುಲದೈವ ಶೀಬಿ ನೃಸಿಂಹ ರನ್ನು ಪ್ರಾರ್ಥಿಸಿ ಗುರುವಂದನೆ ಯನ್ನೂ ಸಲ್ಲಿಸಿದ್ದಾರೆ ಕೃತಿಕಾರರು.

ಅಯೋಧ್ಯೆ ಅಂದರೆ ನಮ್ಮ ಕವಿಪುಂಗವರಿಗೆ ವಿಶೇಷವಾದ ಆಸ್ಥೆ!!

ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಟಾಪನೆಗಾಗಿ ಶಿಲಾನ್ಯಾಸ ಮಾಡಿದ ಸಮಯದ ನೆನಪಿನಲ್ಲಿ ಮೂಡಿ ಬಂದಿರುವ ಶ್ರೇಷ್ಠ ಕವನ ಇದಾಗಿದೆ.

ರಾಮನಂತೆ ನಡೆಯುವ
ರಾಮನಾಮ ಜಪಿಸುವ

ಘೋಷ ವಾಕ್ಯ ನಮ್ಮ ಸಂಸ್ಕೃತಿಯ ಸಾಕಾರತೆಯ ಅಮೃತವಾಣಿ!

ರಾಮನಾಮ..ವೇದಘೋಷ
ರಾಮ ಜಪ..ಷೋಡಶೋಪಚಾರ,
ಉಸಿರಾಟವೇ.. ದೂಪ,
ಜಠರಾಗ್ನಿ…ಬೆಳಗುವ ದೀಪ,
ಅನ್ನ ಪಾನವೇ…ನೈವೇದ್ಯ,
ನಡೆ,ನುಡಿಯೇ..ಪ್ರದಕ್ಷಿಣೆ ಹಾಗೂ ನಮನ,

ಶ್ರೀರಾಮನ ಅನಂತ ಗುಣಗಾನ, ಚಿತ್ರಣ, ಪ್ರಾರ್ಥನ,…ಕೊನೆಗೆ
ಕೀರ್ತಿಯನ್ನು ಸಾರುವಾ
ರಾಮನಾಮ ಜಪಿಸುವಾ
ಇದುವೆ ರಾಮ ಭಕ್ತಿಯು
ರಾಮನಾಮ ಶಕ್ತಿಯು

ಕೈಯಲ್ಲಿ ತಾಳ ಹಿಡಿದು ಕುಣಿಯುತ್ತಾ ಸತ್ಸಂಗದಲ್ಲಿ
ಮೈಮರೆಯುವಂತೆ ಭಾಸವಾಗುತ್ತದೆ.

ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಗಾಗಿ
ಎದುರಾದ ಅವಘಡಗಳನ್ನು ನೆನಪಿಸುತ್ತಾ,ರಾಮ ಭಕ್ತರ, ಕರಸೇವಕರ ನಿಸ್ವಾರ್ಥ ಕೈಂಕರ್ಯದ ಬಗ್ಗೆ ಬೆಳಕು ಚೆಲ್ಲುತ್ತಾ,
ಅವಧ ಗೀತೆಯನ್ನು ನಾಲ್ಕು ಭಾಗಗಳನ್ನಾಗಿ ಮಾಡಿ…ಕಣ್ಣೆದುರಿನಲ್ಲೇ ಈ ಅಪ್ರತಿಮ ಕೈಂಕರ್ಯ ನಡೆಯುತ್ತಾ ಇದೆಯೇನೋ ಎಂಬಂತೆ ಭಾಸವಾಗುವ ಅತ್ಯಂತ ಪರಿಣಾಮಕಾರಿಯಾದ ಕವನ ಕಾವ್ಯ ವನ್ನು ರಚಿಸಿದ್ದಾರೆ ನಮ್ಮ ಕರಣೀಕರು.

ಅಯೋಧ್ಯೆಯ ಸಂಪೂರ್ಣ ಇತಿಹಾಸ, ವರ್ಣನೆ, ರಾಮನ ದರ್ಬಾರ್, ಪ್ರತಿಯೊಂದು ಅಂಶವನ್ನೂ ತುಂಬಾ ಸುಂದರವಾಗಿ ಕವನಗಳನ್ನಾಗಿಸಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲಾ!!

ಶತಮಾನಗಳ ಹೋರಾಟದ ಫಲವಾಗಿ ಇಂದು ಅಯೋಧ್ಯೆ ಬೆಳಗುತ್ತಿದೆ. ನಮ್ಮ ಭಾರತೀಯ ಸಂಸ್ಕೃತಿಯ ದ್ಯೋತಕವಾಗಿ
ಬಾಲರಾಮ ಭವ್ಯ ಮಂದಿರದಲ್ಲಿ ನೆಲೆ ನಿಂತು
ಭಾರತೀಯರನ್ನು ಹರಸುತ್ತಿದ್ದಾನೆ ಎಂಬುದು ಕವಿಯ ಹಾಗೂ ನಮ್ಮ ನಿಮ್ಮೆಲ್ಲರ ಅಚಲ ವಿಶ್ವಾಸ ಹಾಗೂ ದೃಢ ನಂಬಿಕೆ.

ಮುಂಬರುವ ದಿನಗಳಲ್ಲಿ
ನಂಬದಿರಿ ಹುಂಬರನು
ದೊಂಬರಾಟದ ದುರುಳ ದುಷ್ಟರನ್ನು

ಮೈಮರೆವ ಭಾರತೀಯರಿಗೆ ಎಚ್ಚರಿಕೆಯ ಮಾತನ್ನು ಹೇಳಲು ಮರೆತಿಲ್ಲ ನಮ್ಮ ಕವಿ ಮಹಾಶಯರು.

ಎದೆಗುಂದದೇ ನಾವು ಸಾಗೋಣ ಅನವರತ
ಮುಂದೆ ಮುಂದೆ…
ಶ್ರೀ ರಘುರಾಮ ರಾಜ್ಯದಲ್ಲಿ!

ಜೈ ಶ್ರೀರಾಮ್..
ಜೈ ಶ್ರೀರಾಮ್..
ಜೈ ಶ್ರೀರಾಮ್…

ಸಂಕಲನದ ಶೀರ್ಷಿಕೆಯನ್ನು ಹೊತ್ತ ಅದ್ಭುತವಾದ ಕಲ್ಪನೆಯ ಕವನ ಕಾವ್ಯವೇ “ಮಧು ಬನದಲೊಮ್ಮೆ”

ಶಿವ ಪಾರ್ವತಿಯರು ಶಿವರಾತ್ರಿಯಂದು ಬೃಂದಾವನಕ್ಕೆ ಆಗಮಿಸಿ ಶ್ಯಾಮ ಹಾಗೂ ಗೋಪಿಯರೊಡಗೂಡಿ ರಾಸ ಲೀಲೆಯನ್ನು ಆಡುವ ಸುಂದರ ಚಿತ್ರಣ ಓದುಗರ ಕಣ್ಣುಗಳನ್ನು ಪುಳಕಿತಗೊಳಿಸುತ್ತದೆ.

ಈ ತೆರನ ಕಲ್ಪನೆಯೇ ಒಂದು
ಅಚ್ಚರಿ…ಅದರಲ್ಲೂ ಶ್ಯಾಮನ ಮುರಳಿಗೆ, ಗೋಪಿಯರ ನೃತ್ಯಕ್ಕೆ, ಈಶನ ಡಮರುಗ!!!

ಇದಕ್ಕೆ… ಪಾರ್ವತಿ/ ಗೌರಿ ಮಾತೆಯೇ ಸಭೆಗೆ ಅಧಿಪತಿ!! ಅಂದರೆ ಆಕೆಯ ಆದೇಶದಂತೆಯೇ ರಾಸ ಲೀಲಾ ಸಂಭ್ರಮ!

ಕೊನೆಯಲ್ಲಿ …

ಶಿಶುಪಾಲ ಅರಿಯನ್ನು( ಶ್ಯಾಮ/ಕೃಷ್ಣ)
ಪಶುಪಾಲ ಹರನನ್ನು(ಈಶ್ವರ)
ಪಶು ವೃಂದ ವಂದಿಸುತ
ವಶರಾಗಿ ತೆರಳಿದವು!!

ಅಂದರೆ ಆಲ್ಲಿ ಆ ಸಂಭ್ರಮಕ್ಕೆ ಗೋವುಗಳೂ ಬಂದು ಜೊತೆಯಾಗಿದ್ದವು! ಬಹಳ ವಿಷಾದದಿಂದ ಅಲ್ಲಿಂದ ತೆರಳಿದವು!

ಕವಿಯ ಭಾವ ಹಾಗೂ ಕವಿ ಸಮಯವನ್ನು ಅದೆಷ್ಟು ಪ್ರಶಂಸೆ ಮಾಡಿದರೂ ಕಡಿಮೆ ಆಗುತ್ತೆ!!

ಒಟ್ಟಾರೆ ಈ ಕವನ ಈ ಸಂಕಲನದಲ್ಲಿ ಒಂದು ಶ್ರೇಷ್ಠ ಸ್ಥಾನವನ್ನು ಗಳಿಸಿಕೊಂಡಿದೆ.

ಮಾಯಾಮೃಗ…ಕವನದಲ್ಲಿ..ವಿಧಿಯ ಆಟದ ಮುಂದೆ
ದೇವಾನು ದೇವತೆಗಳೂ ನತ ಮಸ್ತಕರಾಗುತ್ತಾರೆ ಎಂಬ ದಿವ್ಯ ಸಂದೇಶವನ್ನು ಸಾರಿದ್ದಾರೆ ನಮ್ಮ ಕರಣಿಕರು.

ಗೋಡೆಗಳ ನಡುವೆ..
ಕವನ ಅವಿಭಕ್ತ ಕುಟುಂಬದ
ಇಂದಿನ ಸ್ಥಿತಿಗಳನ್ನು ಸಾರುತ್ತದೆ.

ಈ ಕವನದ ಪ್ರತಿ ಸಾಲುಗಳೂ ಅಂದಿನ ಹಾಗೂ ಇಂದಿನ ಕುಟುಂಬದ
ಭಾಗವಾಗಿ ನಿಂತಿದೆ.

ಮನೆಯ ತುಂಬೆಲ್ಲವೂ
ಮಡದಿ ಮಕ್ಕಳ ಸಂತೆ
ತನುಮನಕೆ ಸಡಗರವು
ತುಂಬಿ ನಿಶ್ಚಿಂತೆ!!!

ಭೋಗ ಜೀವನದತ್ತ
ಸುತ್ತ ತಿರುಗಿದೆ ಚಿತ್ತ
ತ್ಯಾಗ ಜೀವಿಗಳೆಲ್ಲಾ
ಮಾಯವಾದರು ಅತ್ತ.

ಕಾಲ ಕಳೆದಂತೆಲ್ಲ
ಬಿರುಕು ಬಿಟ್ಟಿದೆ ಗೋಡೆ

ಬೇಡವೆಂದರೂ ಬಿಡದೇ
ಬಂಧ ಒಡೆದರು ಮಂದಿ
ಗೋಡೆ ಎದುರಿಗೆ ಈಗ
ಮತ್ತೊಂದು ಗೋಡೆ

ಕವಿ ಬಹಳ ವಿಷಾದ ಪೂರ್ವಕವಾಗಿ, ಮನನೊಂದು ವೇದನೆ ಅನುಭವಿಸಿರುವ ಭಾವ ಕಾಣುತ್ತದೆ!

ಇದು ನಿತ್ಯ ಸತ್ಯವಾದ ದೃಶ್ಯ!

ಬಹಳ ಅರ್ಥಪೂರ್ಣವಾದ ಹಾಗೂ ಭಾವ ಪೂರ್ಣವಾದ ಕವನ. ತಾಳ್ಮೆಯ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ!!
ಜೀವನೋತ್ಸಾಹದ ದಾರಿಯನ್ನು ತೋರಿಸಿದ್ದಾರೆ!!
ಅನುದಿನದ ಬವಣೆಗೆ ಸ್ಪಂದಿಸಿದ್ದಾರೆ!!
ನಂದಾದೀಪ ಮಹಿಮೆಯನ್ನು ಸಾರಿದ್ದಾರೆ!
ಹಳೆಯ ಛಾಯಾಚಿತ್ರಗಳ ಬಗ್ಗೆ ..
ಹಳೆಯ ಫೋಟೋ ಕವನದಲ್ಲಿ
ಕುಟುಂಬದ ಚಿತ್ರವಾಗಲು ಧ್ವನಿಯಾಗಿದ್ದಾರೆ!
ಗಡಿಯ ದೈವ ಕವನದಲ್ಲಿ
ಗಡಿಯನ್ನು ಹಾಗೂ ನಮ್ಮೆಲ್ಲರನ್ನೂ ಕಾಯುವ, ಕಾಯುತ್ತಿರುವ
ನಿಸ್ವಾರ್ಥ ಸೈನಿಕರ ಬಗ್ಗೆ ಗುಡುಗಿದ್ದಾರೆ!
ಭಾರತಿ ಗೀತೆಯಲ್ಲಿ ಭಾರತಮಾತೆಯ ಭವ್ಯತೆಯನ್ನು ಕೊಂಡಾಡಿದ್ದಾರೆ!

ಕೊನೆಯ ಕವನವಾಗಿ
ಶವದ ಸ್ವಗತ…
ವೈಶಿಷ್ಟ್ಯ ಪೂರ್ಣ ಕವನ!

ಎರಡೂ ದೃಶ್ಯಗಳ ಸಾಮ್ಯತೆ
ಯಲ್ಲಿ ಅದ್ಭುತವಾದ ಸಂದೇಶ ಇಡೀ ಮನುಜ ಕುಲಕ್ಕೆ ಸಂದಾಯವಾಗಿದೆ!
ಒಂದುಕಡೆ ಶವವನ್ನು ಸಾಗಿಸುವ ದೃಶ್ಯ…ಮತ್ತೊಂದು ಕಡೆಯಲ್ಲಿ ಮಗಳು ಗಂಡನ ಮನೆಗೆ ತೆರಳುವ ದೃಶ್ಯ!!

ಒಂದೊಂದು ಪದ ಸಾಲುಗಳೂ ಹೃದಯದ ಬಡಿತವನ್ನು ಹೆಚ್ಚಿಸುತ್ತವೆ!

ಅವುಗಳನ್ನು ವರ್ಣಿಸುವುದು ಅಕ್ಷರಗಳಿಂದ ಸಾಧ್ಯವಿಲ್ಲ!!

ಅದನ್ನು ಓದಿಯೇ ಮನನ ಮಾಡಿಕೊಳ್ಳಬೇಕು!!

ಸಹಜ ಪ್ರಕ್ರಿಯೆ ಆದರೂ
ಅಲ್ಲಿರುವ ಸಂದೇಶ ಅದ್ಭುತ!

ನಿನ್ನ ಪಯಣ ಗಂಡನ ಮನೆಗೆ
ನನ್ನ ಯಾನ ಯಮನ ಕಡೆಗೆ…

ಇವು ಸ್ವಗತದ ಕೊನೆಯ ಎರಡು ಸಾಲುಗಳು!!

ಕವನ ಸಂಕಲನದ ಎಲ್ಲಾ ಕವನಗಳು ಒಂದಲ್ಲಾ ಒಂದು ದೃಷ್ಟಿಯಲ್ಲಿ ಘನತೆಯನ್ನು ಮೆರೆದು ಮಿಂಚುತ್ತಿವೆ ಎಂದರೆ ಅತಿಶಯೋಕ್ತಿ ಅಲ್ಲಾ!!

ಮತ್ತಷ್ಟು ಶ್ರೇಷ್ಠ ಕೃತಿಗಳು ಅವರಿಂದ ಮೂಡಿಬಂದು ತಾಯಿ ಕನ್ನಡಾಂಬೆಯ ಮಡಿಲನ್ನು ತುಂಬಲಿ ಹಾಗೂ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಲಿ ಎಂದು ಮನದುಂಬಿ ಹಾರೈಸುವೆ.

ವಂದನೆಗಳೊಂದಿಗೆ

ಬ. ನಾ. ಸುಬ್ರಹ್ಮಣ್ಯ
ಮೈಸೂರು

Related post