ಮಲ್ಲಿಗೆ ಸುಮ ಘಮ
ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೇ….. ಈ ಹಾಡು ಯಾರು ಕೇಳಿರಲ್ಲ. ಬಂಗಾರದ ಮನುಷ್ಯ ಚಲನಚಿತ್ರದ ಜನಪ್ರಿಯ ಗೀತೆ ಇದು. ಈ ಹಾಡು ಯಾಕೆ ಬಂತು ಅಂತ ಕೇಳಿದ್ರಾ… ಇಲ್ಲೊಂದು ಸ್ವಾರಸ್ಯಕರ ಕಥೆ ಇದೆ ನೋಡಿ. ಮೈಸೂರು ಮಲ್ಲಿಗೆ ವಿಶ್ವವಿಖ್ಯಾತಿಯನ್ನು ಗಳಿಸಿದೆ. ಮೈಸೂರಿನಿಂದ ಸುಮಾರು ನೂರ ನಲ್ವತ್ತು ಕಿಲೋಮೀಟರ್ಗಳ ದೂರದಲ್ಲಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಕೂಡಾ ಈ ಮಲ್ಲಿಗೆ ಹೂವಿನ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತದೆ. ದಿನಬಳಕೆ ಮತ್ತು ಹಬ್ಬ ಹರಿದಿನಗಳಲ್ಲಿ ಮಲ್ಲಿಗೆ ಹೂವು ಇರದಿದ್ರೆ ಆ ಹಬ್ಬವು ಕಳೆಗಟ್ಟುವುದೇ ಇಲ್ಲ. ಇನ್ನು ಮದುವೆ ಮನೆಗಳು, ಇತರೇ ಶುಭ ಸಮಾರಂಭಗಳಲ್ಲಿ ಮಲ್ಲಿಗೆ ಮಾಲೆ ಇಲ್ಲದಿದ್ರೆ ಹೇಗೆ ?.
![](https://sahityamaithri.com/wp-content/uploads/2023/01/set-malle.jpg)
ಇಂತಿಪ್ಪ ಮಲ್ಲಿಗೆಯು ವಿಜಯನಗರದ ಅರಸರಿಗೂ ಅತ್ಯಂತ ಪ್ರೀತಿಪಾತ್ರ, ಇಂದಿನ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಎಂಬ ಊರಿನ ಮಲ್ಲಿಗೆಯೂ ಅಷ್ಟೇ ಪ್ರಖ್ಯಾತಿ ಪಡೆದಿದೆ. ಅಂದಿನ ದಿನಗಳಲ್ಲಿ ಹೆಡಿಗೆಗಳಲ್ಲಿ ( ಬುಟ್ಟಿಗಳು ) ಮಲ್ಲಿಗೆ ಹೂವನ್ನು ತುಂಬಿ ತುಂಗಭದ್ರಾ ನದಿಯ ಹರವಿನಲ್ಲಿ ಬಿಡುತ್ತಿದ್ದರು. ಪಂಪಾನಗರದ ( ಇಂದಿನ ಹಂಪಿ ) ಹೂವಿನ ವರ್ತಕರು ಆ ಹೆಡಿಗೆಗಳನ್ನು ಸಂಗ್ರಹಿಸಿ ಅರಮನೆಗೆ, ವಿರೂಪಾಕ್ಷನ ಸನ್ನಿಧಿಗೆ ಮಲ್ಲಿಗೆ ಹೂವನ್ನು ಸರಬರಾಜು ಮಾಡುವ ಪರಂಪರೆ ಇರಿಸಿಕೊಂಡಿದ್ದರು.ಹೆಡಿಗೆಯಲ್ಲಿ ಹೂವನ್ನು ತುಂಬಿಕಳಿಸಿದ್ದರಿಂದ ಆ ಊರಿಗೆ ಹೆಡಿಗೇಲಿ ಎಂದು ಹೆಸರಾಗಿ ಕಾಲಕ್ರಮೇಣ ಹಡಗಲಿ ಎಂದಾಗಿದೆ….
ಮಾಗಡಿ ಮತ್ತು ಯಲಹಂಕದ ಕೆಂಪೇಗೌಡರಿಂದ ನಿರ್ಮಾಣವಾದ ಬೆಂದಕಾಳೂರಿನ ಎರಡು ಪ್ರಮುಖ ಆಚರಣೆಗಳು ಮಲ್ಲಿಗೆ ಹೂವಿನಿಂದಲೇ ಅಲಂಕೃತವಾಗಿವೆ.
ಚೈತ್ರಮಾಸದ ಹುಣ್ಣಿಮೆಯಂದು ನಡೆಯುವ ಧರ್ಮರಾಯಸ್ವಾಮಿ ( ದ್ರೌಪದಿ ) ಕರಗ ಮತ್ತೊಂದು ಹಲಸೂರಿನ ಹೂವಿನ ಪಲ್ಲಕ್ಕಿ ಉತ್ಸವ. ಕರಗದ ಬಗ್ಗೆ ಈ ಮೊದಲೇ ಹೇಳಿದ್ದೆ. ಹೂವಿನ ಪಲ್ಲಕ್ಕಿಯ ಬಗ್ಗೆ ತಿಳಿದುಕೊಳ್ಳೋಣ.
![](https://sahityamaithri.com/wp-content/uploads/2023/01/p2.jpg)
ಒಂದು ದೊಡ್ಡ ಹಲಸಿನಮರ ಇದ್ದ ಪ್ರದೇಶದಲ್ಲಿ ಎರಡನೇ ಕೆಂಪೇಗೌಡ ವಿಶಾಲವಾದ ಕೆರೆಯನ್ನು ನಿರ್ಮಿಸುತ್ತಾನೆ. ಆ ಪ್ರದೇಶವು ಹಲಸೂರು ಎಂದು ಹೆಸರಾಗುತ್ತದೆ. ಇನ್ನು ಹೊಯ್ಸಳರು ನಿರ್ಮಿಸಿದ ಸೋಮೇಶ್ವರ ದೇವಸ್ಥಾನವು ಇದೇ ಪ್ರದೇಶದಲ್ಲಿರುತ್ತದೆ. ವಾರ್ಷಿಕ ಜಾತ್ರಾ ಮಹೋತ್ಸವವಾಗಿ ಈ ಸೋಮೇಶ್ವರನು ಹೂವಿನ ಪಲ್ಲಕ್ಕಿಯಲ್ಲಿ ಆಸೀನನಾಗಿ ಈ ಪ್ರದೇಶಗಳಲ್ಲಿ ಸಂಚರಿಸುತ್ತಾನೆ. ಕಾಲ ಕ್ರಮೇಣ ಈ ಪ್ರದೇಶದ ಸುಮಾರು ದೇವಾಲಯಗಳಿಂದಲೂ ನಾನಾ ದೇವರುಗಳ ಪಲ್ಲಕ್ಕಿಗಳು ಇದೇ ದಿನ ಹೊರಡುತ್ತವೆ. ನೆರ ರಾಜ್ಯ ತಮಿಳುನಾಡಿನ ಹಲವು ಕುಶಲಕರ್ಮಿಗಳು ಈ ಸಂಭ್ರಮಕ್ಕೆ ಆಗಮಿಸುತ್ತಾರೆ. ಸಂಪೂರ್ಣವಾಗಿ ದುಂಡು ಮಲ್ಲಿಗೆಯ ಮೊಗ್ಗಿನಿಂದಲೇ ಪಲ್ಲಕ್ಕಿಯನ್ನು ಸಿಂಗರಿಸುತ್ತಾರೆ. ಮೆರವಣಿಗೆ ಹೊರಟೊಡನೇ ಮಲ್ಲಿಗೆಯ ಕಂಪು ಇಡೀ ಬಡಾವಣೆಯಲ್ಲಿ ಘಮ ಘಮಿಸುತ್ತದೆ.
ಬೆಂಗಳೂರು ಕರಗದ ರೀತಿಯಲ್ಲಿಯೇ ಈ ಉತ್ಸವವೂ ಸಾಕಷ್ಟು ಸಂಭ್ರಮ ಸಡಗರಗಳೊಂದಿಗೆ ನೆರವೇರುತ್ತದೆ.
![](https://sahityamaithri.com/wp-content/uploads/2023/01/Mahesh-C-N-3.jpg)
ಸಿ.ಎನ್. ಮಹೇಶ್