ಮೇ 5 ರಂದು ಮ್ಯಾನ್ ಆಫ್ ದಿ ಮ್ಯಾಚ್

ಮ್ಯಾನ್ ಆಫ್ ದಿ ಮ್ಯಾಚ್

ಸತ್ಯ ಸೂತ್ರದಾರನಾಗಿರುವ ‘ಮ್ಯಾನ್ ಆಫ್ ದಿ ಮ್ಯಾಚ್‘ ಚಲನಚಿತ್ರ ಇದೇ ಮೇ 5 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.

ಕನ್ನಡದ ಈಗಿನ ದಿನಮಾನದ ಪ್ರತಿಭಾವಂತ ಯುವ ನಿರ್ದೇಶಕರ ಟಾಪ್ ಟೆನ್ ನಿರ್ದೇಶಕರಲ್ಲಿ ಪಟ್ಟಿಯಲ್ಲಿ ಡಿ ಸತ್ಯಪ್ರಕಾಶ್ ಕೂಡ ಸೇರಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ ‘ರಾಮಾ ರಾಮಾ ರೇ‘ ಹಾಗೂ ‘ಒಂದಲ್ಲಾ ಎರಡಲ್ಲಾ‘ ನಂತರ ಸತ್ಯ ಅವರು ಕರ್ಮಶಿಯಲ್ ಟಚ್ ಕೊಟ್ಟು ಈ ಮೂರನೇ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಿದು ಆನ್‍ಲೈನ್ ತೆರೆಯಲ್ಲಿ ಬರಲಿದೆ.

ಒಂದೇ ದಿನ ನಡೆಯುವ ಕತೆಯನ್ನು ವಿಭಿನ್ನ ತಿರುವುಗಳೊಂದಿಗೆ ಹೆಣೆಯಲಾಗಿದೆ ಎನ್ನುವುದು ಸತ್ಯ ಅವರ ಮಾತು. ತಮ್ಮ ಎಂದಿನ ತಂಡವರು ಇಲ್ಲಿ ಇದ್ದಾರೆ ಎನ್ನುತ್ತಾರೆ ಸತ್ಯ. ತಮ್ಮ ತಂಡದವರಷ್ಟೇ ಅಲ್ಲದೇ ಮತ್ತಷ್ಟು ನುರಿತ ಹಾಗೂ ಹೊಸ ಕಲಾವಿದರೂ ಇಲ್ಲಿ ನಟಿಸಿದ್ದಾರೆ ಎಂದರು ಸತ್ಯ. ಸರಿ ಸುಮಾರು ಎಪ್ಪತ್ತು-ಎಂಭತ್ತು ಕಲಾವಿದರನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ.

ರಾಮಾ ರಾಮಾ ರೇ‘ ಚಿತ್ರದಲ್ಲಿ ಕಳ್ಳನ ಪಾತ್ರ ನಿರ್ವಹಿಸಿ ಗಮನ ಸೆಳೆದಿದ್ದ ‘ಸಹಜ ನಟ’ ನಟರಾಜ್ ಚಿತ್ರದಲ್ಲಿ ನಿರ್ದೇಶಕನ ಪಾತ್ರದಲ್ಲಿದ್ದಾರೆ. ಧರ್ಮಣ್ಣ ಕಡೂರ್, ಸುಂದರ್, ವೀಣಾ ಸುಂದರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾಟೋಗ್ರಫಿ ಲವಿತ್ ಹಾಗೂ ಸಂಗೀತ ವಾಸುಕಿ ವೈಭವ್ ಎಂದಿನಂತೆ ತಮ್ಮ ಛಾಪನ್ನು ಇಲ್ಲೂ ಮುದ್ರಿಸಿದ್ದಾರೆ. ಇವರ ವಿಭಿನ್ನ ಶೈಲಿಯ ಕಾರ್ಯವನ್ನು ಈ ಚಿತ್ರ ನೋಡಿಯೇ ಅರಿಯಬೇಕಿದೆ.

ಪುನೀತ್ ಅವರು ಈ ಚಿತ್ರಕ್ಕೆ ಬೆನ್ನೆಲುಬಾಗಿದ್ದು ನಿರ್ಮಾಣದ ಹೊಣೆ ಹೊತ್ತಿದ್ದರು. ಒಮ್ಮೆ ಚಿತ್ರೀಕರಣದ ಲೊಕೇಶನ್‍ಗೂ ಬಂದು ಹಾರೈಸಿದ್ದರು. ಹೀಗೆ ಹೊಸ ನಿರ್ದೇಶಕರಿಗೆ ಅವಕಾಶ ಕೊಟ್ಟಿದ್ದ ಪುನೀತ್ ಈ ಚಿತ್ರದ ಬಿಡುಗಡೆಯನ್ನು ನೋಡಲಿಲ್ಲ ಎಂಬುದೇ ಬೇಸರದ ಸಂಗತಿ.

ಸತ್ಯ ಅಂಡ್ ಮಯೂರ ಪಿಕ್ಚರ್ ಅಡಿಯಲ್ಲಿ ಹೋದ ವರ್ಷದ ಏಪ್ರಿಲ್‍ನಲ್ಲಿ ಕನ್ನಡ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಕೊಟ್ಟರು. ಈ ಸಂದರ್ಭದಲ್ಲಿ ಕನ್ನಡದ ಹೆಸರಾಂತ ಡಾಲಿ ಧನಂಜಯ್ ಕೂಡ ಜೊತೆಯಾಗಿದ್ದರು. ಸತ್ಯ ನಿರ್ದೇಶಿಸಿದ ‘ಜಯನಗರ 4ನೇ ಬ್ಲಾಕ್‘ ಕಿರು ಚಿತ್ರದಲ್ಲಿ ನಟಿಸಿದ್ದ ಧನಂಜಯ್ ಸತ್ಯ ಅವರ ತಂಡದ ಒಬ್ಬ ಸದಸ್ಯ ಕೂಡ ಹೌದು. ಈ ಚಿತ್ರವು ಸತ್ಯ ಅವರ ಉತ್ತಮ ನಿರ್ದೇಶನದ ಚಿತ್ರ ಮನರಂಜನೆಯನ್ನು ಖಂಡಿತಾ ನೀಡುತ್ತೆ ಎಂದಿನ ಸತ್ಯ ಅವರ ಚಿತ್ರಗಳಂತೆ ಒಂದು ಮೆಸೇಜ್ ಕೂಡ ಇರುತ್ತೆ. ಮೊದಲೆರಡೂ ಚಿತ್ರಗಳಿಗಿಂತ ಈ ಚಿತ್ರವು ವಿಭಿನ್ನವಾಗಿದ್ದು ಎಲ್ಲ ವರ್ಗದ ಚಿತ್ರಪ್ರೇಮಿಗಳನ್ನು ಸೆಳೆಯುತ್ತೆ ಎನ್ನುವುದು ಖಚಿತ ಎಂದಿದ್ದಾರೆ. ಹಾಗೇ ಮುಂದುವರೆದು ಮಾತಾಡಿರುವ ಧನಂಜಯ್ ಈ ಚಿತ್ರದ ಹೆಸರೇ ವಿಭಿನ್ನವಾಗಿದ್ದು ಸತ್ಯ ತಮ್ಮ ಎಲ್ಲಾ ಮ್ಯಾಚ್‍ಗಳಲ್ಲೂ ಗೆಲ್ಲಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಬೆಳೆಯಲಿ ಎಂದು ಹಾರೈಸಿದರು. ಧನಂಜಯ್ ಅವರೇ ಹೇಳುವಂತೆ ಮುಂದೆ ಸತ್ಯ ನಿರ್ದೇಶನದಲ್ಲಿ ಒಂದು ಚಿತ್ರವನ್ನು ಮಾಡುತ್ತಾರಂತೆ!
ಇದೇ ಹೆಸರಿನ ಚಿತ್ರವು ತೆಲುಗಿನಲ್ಲೂ ಇದೆ, ಆದರೆ ಇದು ಅದಲ್ಲಾ!

ಸತ್ಯ ತಂಡದ ಹಿನ್ನೆಲೆ!

ಸತ್ಯ ಮೊದಲ ಬಾರಿಗೆ ನಿರ್ದೇಶನಕ್ಕಿಳಿದು ನಿರ್ದೇಶಿಸಿದ ‘ಜಯನಗರ 4ನೇ ಬ್ಲಾಕ್’ ಕಿರು ಚಿತ್ರದಲ್ಲಿ ಧನಂಜಯ್ ನಟಿಸಿದ್ದರು. ಆನಂತರ ಮೊಟ್ಟ ಮೊದಲನೆಯದಾಗಿ ಚಿತ್ರ ನಿರ್ದೇಶನ ಮಾಡಿದ್ದು ‘ರಾಮಾ ರಾಮಾ ರೇ‘. ಈ ಚಿತ್ರವು ಕನ್ನಡ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿತು. ಅಲ್ಲದೇ ಕನ್ನಡ ಚಿತ್ರರಂಗದ ಎಲ್ಲರ ಗಮನವನ್ನು ಸೆಳೆದ ಚಿತ್ರವಾಯ್ತು.

ಕನ್ನಡಕ್ಕೆ ಹೊಸ ಪ್ರಯೋಗದ ಚಿತ್ರ ಕೊಟ್ಟ ಹೆಗ್ಗಳಿಕೆಯನ್ನು ಮೊದಲ ಚಿತ್ರವೇ ಪಡೆಯಿತು. ಆ ಚಿತ್ರದಲ್ಲಿ ಪ್ರಮುಖ ನಟರಾಗಿದ್ದ ನಟರಾಜ್‍ಗೆ ‘ಕಳ್ಬೆಟ್ಟದ ದರೋಡೆಕೋರರು’ ಚಿತ್ರದಲ್ಲಿ ಹೀರೋ ಪಟ್ಟ ಸಿಕ್ತು. ‘ರಾಮಾ ರಾಮಾ ರೇ’ ಚಿತ್ರದಲ್ಲಿ ಹಾಸ್ಯ ಕಲಾವಿದರಾಗಿ ನಟಿಸಿದ್ದ ಧರ್ಮಣ್ಣ ಅವರಿಗೆ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಅವಕಾಶಗಳು ಹುಡುಕಿ ಬಂತು. ‘ನಾಟಿ ಸ್ಟಾರ್’ ಎಂದೇ ಖ್ಯಾತರಾದರು. ಕನ್ನಡದ ಪ್ರಖ್ಯಾತ ಹೀರೋಗಳ ಚಿತ್ರಗಳಲ್ಲೂ, ಹೊಸ ರೀತಿಯ ಚಿತ್ರಗಳಲ್ಲೂ ಅವಕಾಶಗಳು ಧರ್ಮಣ್ಣ ಅವರನ್ನು ಹುಡುಕಿ ಬಂತು. ಈಗ ಧರ್ಮಣ್ಣ ತುಂಬಾ ಬ್ಯುಸಿಯಾಗಿರುವ ಹಾಸ್ಯ ಕಲಾವಿದ ಎನ್ನಲ್ಲಡ್ಡಿಯಿಲ್ಲ.

‘ರಾಮಾ ರಾಮಾ ರೇ’ ಚಿತ್ರಕ್ಕೆ ಸಂಗೀತ ನೀಡಿದ್ದ ವಾಸುಕಿ ವೈಭವ್ ಅವರ ‘ಕೇಳು ಕೃಷ್ಣ ಕೇಳು ಪಾರ್ಥ…’ ಸಾಕಷ್ಟು ಹೆಸರು ಮಾಡಿ ಎಲ್ಲರ ಮೊಬೈಲ್‍ಗಳಲ್ಲಿ ಮೊಳಗಿತು. ಅದರ ಬೆನ್ನಲ್ಲೇ ಹಲವಾರು ಚಿತ್ರಗಳಿಗೆ ಅವಕಾಶವೂ ಸಿಕ್ತು ಖ್ಯಾತರೂ ಆದ್ರೂ, ಈಗ ಖ್ಯಾತ ಸಂಗೀತ ನಿರ್ದೇಶಕ, ಖ್ಯಾತ ಗಾಯಕ ಎಂದು ಹೆಸರಾಗಿದ್ದಾರೆ. ಈ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಲವಿತ್ ಕೂಡ ಖ್ಯಾತರಾದರು. ಈಗ ಹೆಚ್ಚು ಬ್ಯುಸಿಯಾಗಿರುವ ಸಿನಿಮಾಟೋಗ್ರಫರ್ ಪಟ್ಟಿಯಲ್ಲಿ ಲವಿತ್ ಕೂಡ ಒಬ್ಬರು. ಸತ್ಯ ಅವರಿಗೆ ‘ಒಂದಲ್ಲಾ ಎರಡಲ್ಲಾ‘ ಚಿತ್ರ ಮಾಡಲು ಅವಕಾಶವೂ ಸಿಕ್ತು. ಅದೂ ಯಶಸ್ಸನ್ನು ತಂದು ಕೊಡ್ತು.
ಹೀಗೆ ‘ರಾಮಾ ರಾಮಾ ರೇ‘ ಒಂದು ಚಿತ್ರವು ಕನ್ನಡ ಚಿತ್ರರಂಗಕ್ಕೆ ಒಂದೇ ಬಾರಿಗೆ ಹೀರೋ, ಹಾಸ್ಯ ಕಲಾವಿದ, ಸಂಗೀತ ನಿರ್ದೇಶಕ, ಸಿನಿಮಾಟೋಗ್ರಫರ್ ಹಾಗೂ ನಿರ್ದೇಶಕ ಹೀಗೆ ಮತ್ತಷ್ಟು ಹೊಸ ತಂತ್ರಜ್ಞರ ಹಾಗೂ ಹೊಸ ನಟರ ಪರಿಚಯಕ್ಕೆ ಕಾರಣವಾಯ್ತು. ‘ಕೇಳು ಕೃಷ್ಣ ಕೇಳು ಪಾರ್ಥ…’ ಚಿತ್ರದ ಪ್ರಮೋಶನ್ ಕೆಲಸವೂ ವಿಭಿನ್ನವಾಗಿದ್ದು ತಂತ್ರಜ್ಞರು, ಹೊಸ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಪರಿಚಯವಾದರು.

ಸತ್ಯ ಪಿಕ್ಚರ್ ತಂಡವು ಸತ್ಯ ಡಿಸ್ಟ್ರಿಬ್ಯೂಶನ್ ಅನ್ನೂ ಆರಂಭಿಸಿದ್ದಾರೆ. ಅಲ್ಲದೇ ಹಲವು ಹೊಸ ಪ್ರತಿಭೆಗಳ ಕಿರುಚಿತ್ರಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಉತ್ತಮ ವೇದಿಕೆಯನ್ನು ರೂಪಿಸುವ ಪ್ರಯತ್ನದಲ್ಲಿದ್ದಾರೆ.

ತೆಲುಗಿಗೂ ಹೋದ ‘ರಾಮಾ ರಾಮಾ ರೇ’!

‘ಆಟಗದರಾ ಶಿವಾ’ ಎಂಬ ಹೆಸರಲ್ಲಿ ತೆಲುಗಲ್ಲೂ ರೀಮೇಕ್ ಆಯ್ತು. ರಾಕ್‍ಲೈನ್ ವೆಂಕಟೇಶ್ ಅವರ ನಿರ್ಮಾಣ. ಕನ್ನಡದ ದೊಡ್ಡಣ್ಣ ಅದರಲ್ಲಿ ಮುಖ್ಯ ಪಾತ್ರದಲ್ಲಿದ್ದ್ದಾರೆ. ಲವಿತ್ ಸಿನಿಮಾಟೋಗ್ರಫಿ ಮಾಡಿದ್ದಲ್ಲದೇ ವಾಸುಕಿ ವೈಭವ್ ಅದರಲ್ಲಿ ಹಾಡಿದ್ದಾರೆ. ಅಲ್ಲಿ ಕೂಡ ಈ ಚಿತ್ರವು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯ್ತು ಎನ್ನುವುದು ಹೆಮ್ಮೆಯ ಸಂಗತಿ.

ರಾಮಾ ರಾಮಾ ರೇ, ಒಂದಲ್ಲಾ ಎರಡಲ್ಲಾ ಹಾಗೂ ಈ ಮ್ಯಾನ್ ಆಫ಼್ ದ ಮ್ಯಾನ್ ಚಿತ್ರಗಳಲ್ಲಿ, ಧನಂಜಯ, ರಂಜನ್, ನಾಗೇಂದ್ರ ಎಚ್.ಎಸ್, ಪದ್ಮನಾಭ ಭಟ್ ಹಾಗೂ ಸುಂದರ್ ಅವರ ಬರವಣಿಗೆಯ ಸಹಾಯವಿದೆ. ಇವರೆಲ್ಲರೂ ಸತ್ಯ ತಂಡದ ಬರಹಗಾರರು. ಸತ್ಯ ತಂಡದಲ್ಲಿ ಹಿರಿಯ ಸಂಕಲನಕಾರ ಬಿ ಎಸ್ ಕೆಂಪರಾಜ್ ಅವರಿದ್ದಾರೆ. ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲಾ’ ಹಾಗೂ ಈ ‘ಮ್ಯಾನ್ ಆಪ್ ದಿ ಮ್ಯಾಚ್” ಮೂರು ಚಿತ್ರಗಳಿಗೂ ಸಂಕಲನಕಾರರಾಗಿ ದ್ದಾರೆ. ಸತ್ಯ ಅವರ ಉತ್ತಮ ಚಿತ್ರಗಳ ಕೊಡುಗೆಯಲ್ಲಿ ಸಂಕಲನಕಾರರಾಗಿ ಕೆಂಪರಾಜ್ ಕೊಡುಗೆಯೂ ಇದೆ ಎಂಬುದು ಸತ್ಯ, ಅದು ಅತಿಶಯೋಕ್ತಿ ಆಗಲಾರದು.

ಸತ್ಯ ಸೂತ್ರದಾರನಾಗಿರುವ ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರವನ್ನು ಅಮೆಜಾನ್ ಪ್ರೈಮ್‍ನಲ್ಲಿ ನೋಡೋಣ. ಮತ್ತಷ್ಟು ಸಮಾನ ಮನಸ್ಕರು ನೋಡಲು ಪ್ರೋತ್ಸಾಹಿಸೋಣ!

ತುಂಕೂರ್ ಸಂಕೇತ್

Related post

Leave a Reply

Your email address will not be published. Required fields are marked *