ಮೋಡದ ಮರೆಯ ಬೆಳಕು
ರವಿಕಿರಣವದು ತಿಣುಕಾಡಿದೆ
ಮೋಡದ ಮರೆಯಿಂದ ಹೊರಬರಲು!
ಬೆಳಕದು ಬಂಧನ ಬಿಡಿಸಿ ಬಂದಿದೆ..
ಬುವಿಯ ಜೀವರಾಶಿಯ ಕಾಯಲು!!
ಪ್ರತಿಭೆಯು ಪ್ರಭೆಯಂತೆ ಹೊಳೆಯಲು
ಅಹಮ್ಮಿನ ಮೋಡ ಸರಿಯಬೇಕು!
ಟೀಕಿಸುವವರ ಬಿರುನುಡಿಯ ಎದುರಿಸಲು..
ತಾಳ್ಮೆಯ ಗೋಡೆಯನೊಮ್ಮೆ ಮುರಿಯಬೇಕು!!
ಬೆಳ್ಳಿಯ ಕಿರಣವು ಬೆಳ್ಮುಗಿಲ
ಮೋಡದಿಂದ ಜಾರಿ ಧರೆ ಬೆಳಗುವಂತೆ!
ಮಾತಿನ ಸಿಹಿ ಮೌನದ ಕಹಿಯ ಮೀರಿ..
ಮನದೊಳಗೆ ಲಹರಿ ಮಿಂಚುವಂತೆ!!
ಕಾನನದ ಹಸಿರು ಚಿಗುರಲು
ಹೊಂಗಿರಣದ ಬೆಳಕು ಬೇಕು!
ಬೆಳ್ಳಿಮೋಡದಂಚಲಿ ದಿನಪ ನಗುತಿರಲು..
ಜೀವಸಂಕುಲವದು ನಿತ್ಯ ಬೆಳೆಯಬೇಕು!!
![](http://sahityamaithri.com/wp-content/uploads/2023/11/Sumana-Ramananda-2.jpg)
ಸುಮನಾ ರಮಾನಂದ