ವ್ಯಕ್ತಿಯ ವ್ಯಕ್ತಿತ್ವ ಪೆನ್ಸಿಲ್‌ನಂತೆ

ವ್ಯಕ್ತಿಯ ವ್ಯಕ್ತಿತ್ವ ಪೆನ್ಸಿಲ್‌ನಂತೆ

ಅಕ್ಷರಗಳನ್ನು ಸುಂದರವಾಗಿ ಬರೆಯುವ ಪೆನ್ಸಿಲ್ ವಿಭಿನ್ನ ವಿಚಾರಗಳನ್ನು ದಾಖಲಿಸಿ ಇಡಬಲ್ಲದು. ಅದ್ಭುತವಾದ ಕಥೆಗಳು, ಕವನಗಳು, ಒಳ್ಳೆಯ ಮತ್ತು ಕೆಟ್ಟ ವಿಚಾರಗಳನ್ನು ಬರೆಯುವ ಮೂಲಕ ಮತ್ತು ಬರೆದ ಅಕ್ಷರಗಳಿಂದ ವ್ಯಕ್ತಿ ವ್ಯಕ್ತಿಗಳಲ್ಲಿ ಪ್ರೀತಿ ಹುಟ್ಟಿಸುವ ಅಥವಾ ದ್ವೇಷವನ್ನು ಬಿತ್ತುವ ಎರಡೂ ಗುಣ ಪೆನ್ಸಿಲ್‌ ನಲ್ಲಿ ಇದೆ. ಆದರೆ, ಪೆನ್ಸಿಲಿಗೆ ಬರೆಯುವ ಕೈಗಳ ಸಹಕಾರ ಇಲ್ಲದಿದ್ದರೆ ಕೇವಲ ಪೆನ್ಸಿಲ್ ಒಂದೇ ಏನನ್ನೂ ಬರೆಯಲು ಯಾ ಮಾಡಲು ಸಾಧ್ಯವಿಲ್ಲ.

ಅಕ್ಷರಗಳನ್ನು ಬರೆಯುವ ಪೆನ್ಸಿಲ್ ಬಳಸುತ್ತಾ ಹೋದಂತೆ ಅದರ ಮೊನಚನ್ನು ಮತ್ತು ಬರೆಯುವ ಗುಣವನ್ನು ಕಳೆದುಕೊಳ್ಳುತ್ತದೆ. ಆಗ ಪೆನ್ಸಿಲ್‌ನ ತುದಿಯನ್ನು ಕೆತ್ತಿ ಮತ್ತೊಮ್ಮೆ ಮೊನಚು ಮಾಡಿದಾಗ ಮತ್ತೆ ತೀಕ್ಷ್ಣವಾಗಿ ಬರೆಯಲು ಪ್ರಾರಂಭಿಸುತ್ತದೆ. ಮನುಷ್ಯನ ಬದುಕಿನಲ್ಲಿ ಎದುರಾಗುವ ಕಷ್ಟಗಳು ಪೆನ್ಸಿಲನ್ನು ಕೆತ್ತುವಂತಹ ಕೆಲಸಕ್ಕೆ ಸಮಾನವಾದದ್ದು. ಮೊನಚು ಮಾಡುವಾಗ ನೋವಾಗುವುದು ಸಹಜ. ಆದರೆ ಆ ಮೊನಚು ಮಾಡುವ (ಕೆತ್ತುವ) ಕಷ್ಟವು ಕಳೆದ ಮರುಕ್ಷಣ ಮತ್ತೆ ಮನುಷ್ಯ ಚುರುಕಾಗುತ್ತಾನೆ ಎನ್ನುವುದನ್ನು ಅರಿತು ಬದುಕಿನ ಕಷ್ಟ ಕಾರ್ಪಣ್ಯಗಳು ತಾತ್ಕಾಲಿಕವೆಂದು ತಿಳಿದು ಮುಂದೆ ದೃಢವಾದ ಹೆಜ್ಜೆಯೊಂದಿಗೆ ಸಾಗಬೇಕು.

ಅದೇ ರೀತಿ ಪೆನ್ಸಿಲಿನಿಂದ ದಾಖಲಿಸಿರುವುದು ತಪ್ಪಾದರೆ ಆ ತಪ್ಪನ್ನು ರಬ್ಬರಿನಿಂದ ಒರೆಸಿ ಮತ್ತೆ ತಿದ್ದಿ ಬರೆಯಬಹುದು. ಬದುಕಿನಲ್ಲಿ ಜರುಗಿರುವ ಯಾವುದೇ ವಿಚಾರವನ್ನು ಒರೆಸಲು ಅಥವಾ ತಿದ್ದಲು ಪ್ರತಿ ಬಾರಿಯೂ ಕೆಟ್ಟ ಘಟನೆಗಳೇ ಆಗಬೇಕು ಎಂದಿಲ್ಲ. ಜೀವನದಲ್ಲಿ ತಪ್ಪುಗಳು ಘಟಿಸಿದಾಗ ತಪ್ಪುಗಳನ್ನು ಸಮರ್ಥಿಸಿಕೊಳ್ಳದೇ ನಿರ್ದಾಕ್ಷಿಣ್ಯದಿಂದ ಅವುಗಳನ್ನು ಬದುಕಿನಿಂದ ಒರೆಸಿಬಿಡಬೇಕು. ಮತ್ತು ತಪ್ಪುಗಳನ್ನು ತಿದ್ದಿಕೊಂಡು ಬದುಕಬೇಕು. ಅದೇ ರೀತಿ ಪೆನ್ಸಿಲ್‌ನ ಮೇಲ್ಮೆಯ ಹಿಡಿಕೆ ಎಷ್ಟೇ ಸುಂದರವಾಗಿ ಮತ್ತು ಆಕರ್ಷಕವಾಗಿ ಇದ್ದರೂ ಅದರ ಒಳಗೆ ಇರುವ ಸೀಸದ ಕಡ್ಡಿ ಗುಣಮಟ್ಟದ್ದು ಆಗಿರದಿದ್ದರೆ ಅದಕ್ಕೆ ಯಾವುದೇ ಬೆಲೆಯೂ ಇರುವುದಿಲ್ಲ. ಮನುಷ್ಯನ ಜೀವನವೂ ಇದೇ ರೀತಿಯಾಗಿದ್ದು, ವ್ಯಕ್ತಿ ನೋಡಲು ಎಷ್ಟೇ ಆಕರ್ಷಕ, ಸುಂದರ ರೂಪ, ಎತ್ತರ ಮತ್ತು ದಪ್ಪಗಿದ್ದು, ಧನಿಕನಾಗಿದ್ದರೂ ಆತನಲ್ಲಿ ಒಳ್ಳೆಯ ಗುಣಗಳೇ ಇಲ್ಲದಿದ್ದರೆ, ವ್ಯಕ್ತಿತ್ವವಿಲ್ಲದಿದ್ದರೆ ವ್ಯಕ್ತಿಗೆ ಯಾವ ಬೆಲೆಯೂ ಇರುವುದಿಲ್ಲ.

ಪೆನ್ಸಿಲ್‌ನಲ್ಲಿ ಯಾವುದೇ ವಿಷಯವನ್ನು ಬರೆದರೂ, ಅದನ್ನು ಅಕ್ಷರಗಳ ರೂಪದಲ್ಲಿ ಶಾಶ್ವತವಾಗಿ ಉಳಿಸಿ ತಾನು ನಿಧಾನವಾಗಿ ಮುಗಿದು ಹೋಗುತ್ತದೆ. ಪೆನ್ಸಿಲ್ ಕೆಟ್ಟ ವಿಚಾರಗಳನ್ನು, ಒಳ್ಳೆಯ ವಿಚಾರಗಳನ್ನೂ ಬರೆದು ಗುರುತಾಗಿ ಇಡುತ್ತದೆ. ಅದೇ ರೀತಿ ಜೀವನ ಎನ್ನುವ ಕಾಗದದಲ್ಲಿ ಯಾವುದೇ ವಿಚಾರವನ್ನು ಬರೆಯುವ ಮೊದಲು ಬಹಳಷ್ಟು ಜಾಗೃತರಾಗಿದ್ದು, ಸಾಧ್ಯವಾದಷ್ಟು ಉತ್ತಮ ವಿಚಾರಗಳನ್ನೇ ಬರೆಯಲು ಪ್ರಯತ್ನಿಸಬೇಕು. ಬರೆದುದು ತಪ್ಪಾಗುವ ಮತ್ತು ಅಳಿಸಿ ತಿದ್ದುವ ಮೊದಲೇ ಸಾಕಷ್ಟು ಯೋಚಿಸಿ ಬರೆಯಬೇಕು. ತಪ್ಪಾಗಿ ಬರೆದುಬಿಟ್ಟರೆ ಅದರ ಗುರುತು ಶಾಶ್ವತವಾಗಿ ಉಳಿದುಬಿಡುತ್ತದೆ. ಆದ್ದರಿಂದ ನಾವೆಲ್ಲರೂ ಜೀವನದಲ್ಲಿ ಪೆನ್ಸಿಲ್‌ನಲ್ಲಿರುವ ಗುಣವನ್ನು ಅಳವಡಿಸಿಕೊಂಡಾಗ ಉತ್ತಮ ವ್ಯಕ್ತಿಗಳಾಗಿ ಸಮಾಜದಲ್ಲಿ ಮತ್ತು ವ್ಯವಸ್ಥೆಯಲ್ಲಿ ಗುರುತಿಸಿಕೊಳ್ಳುತ್ತೇವೆ. ಮನುಷ್ಯನ ವ್ಯಕ್ತಿತ್ವವು ಇದೇ ರೀತಿ ಪೆನ್ಸಿಲ್‌ನಂತೆ ಆಗಬೇಕು. ಸಮಾಜ ಸೇವೆಯಲ್ಲಿ ವ್ಯಕ್ತಿಯು ಪೆನ್ಸಿಲ್‌ನಂತೆ ನಿಧಾನವಾಗಿ ಕಳೆದುಹೋದರೂ ಆ ವ್ಯಕ್ತಿಯು ತಾನು ಮಾಡಿದ ಉತ್ತಮ ಕೆಲಸಗಳು ಮತ್ತು ಆತ ಕಾಗದದಲ್ಲಿ ಬರೆದಿಟ್ಟ ಒಳ್ಳೆಯ ವಿಚಾರಗಳು ಮತ್ತು ಅಕ್ಷರಗಳು ಪ್ರಪಂಚದಲ್ಲಿ ಶಾಶ್ವತವಾಗಿ ಉಳಿಯುವ ರೀತಿಯ ಸಾಧನೆಯನ್ನು ನಾವೆಲ್ಲರೂ ಮಾಡಬೇಕು.

ಪೆನ್ಸಿಲ್‌ನಿಂದ ಮನುಷ್ಯ ಕಲಿಯಬೇಕಾದ ನಾಲ್ಕು ಪಾಠಗಳು ಇವೆ. ಅವುಗಳೆಂದರೆ, ಬರೆಯುವ ಗುಣವಿರುವ ಪೆನ್ಸಿಲ್ ತಾನೇ ಸ್ವತಂತ್ರವಾಗಿ ಏನನ್ನೂ ಬರೆಯಲು ಸಾಧ್ಯವಿಲ್ಲ. ಇತರರು ಹಿಡಿದು ಬರೆದಾಗಲೇ ಅದರ ಮೌಲ್ಯ ಹೆಚ್ಚುವುದು. ಹಾಗೆಯೇ ನಮ್ಮೊಂದಿಗೆ ಇತರರೂ ಇದ್ದಾಗಲೇ ನಮ್ಮ ಮೌಲ್ಯ ಹೆಚ್ಚುತ್ತದೆ. ಪೆನ್ಸಿಲ್‌ನ ಹೊರಭಾಗದ ಮರದ ಹಿಡಿಕೆಗೆ ಮೌಲ್ಯವಿರದೇ ಕೇವಲ ಅದರ ಒಳಗೆ ಇರುವ ಸೀಸದ ಗುಣಮಟ್ಟಕ್ಕೆ ಮಾತ್ರ ಬೆಲೆಯಿರುವಂತೆ ವ್ಯಕ್ತಿಯ ಬಾಹ್ಯ ನೋಟಕ್ಕೂ ಬೆಲೆ ಇರದೇ ಆತನಲ್ಲಿರುವ ಮೌಲ್ಯಕ್ಕೆ ಮಾತ್ರ ಬೆಲೆ ಇರುತ್ತದೆ. ಪೆನ್ಸಿಲ್ ಬರೆಯುತ್ತಾ ಹೋದಂತೆ ಮೊನಚು ಕಳೆದುಕೊಂಡಾಗ ಅದರ ತುದಿಯನ್ನು ಕತ್ತರಿಸಿ ಮತ್ತೆ ಮೊನಚು ಮಾಡುವ ಹಾಗೇ ನಮ್ಮ ಜೀವನದಲ್ಲಿ ಆಗಿಂದಾಗ್ಗೆ ಹೆಚ್ಚಿನ ಜ್ಞಾನ ಮತ್ತು ಕೌಶಲವನ್ನು ಗಳಿಸಿಕೊಳ್ಳುವ ಮೂಲಕ ಮೊನಚು ಮಾಡುವ ಗುಣವಿರಬೇಕು. ಪೆನ್ಸಿಲ್ ಮೂಲಕ ಬರೆದದ್ದು ತಪ್ಪಾದಾಗ ಅದನ್ನು ರಬ್ಬರ್ ಮೂಲಕ ಒರೆಸಿ ಮತ್ತೆ ಸರಿಪಡಿಸುವಂತೆ ಜೀವನದಲ್ಲಿ ತಪ್ಪು ಘಟಿಸಿದಾಗ ಅದನ್ನು ತಿದ್ದಿಕೊಂಡು ಮತ್ತೆ ದೃಢವಾಗಿ ಸಾಗಬೇಕು. ಈ ಜಗತ್ತಿನಲ್ಲಿ ಎಲ್ಲವೂ ನನ್ನೊಬ್ಬನಿಂದಲೇ ಎನ್ನುವುದನ್ನು ಮರೆತು ಇತರರ ಸಹಕಾರದೊಂದಿಗೆ ಕಾಲ ಕಾಲಕ್ಕೆ ತನ್ನನ್ನು ತಾನು ಚೂಪು ಮಾಡಿಕೊಂಡು, ತಿದ್ದಿಕೊಂಡು ಬದುಕುವುದನ್ನು ಕಲಿಯಬೇಕು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ:9742884160

Related post