ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ 15 ಕೃತಿಗಳ ಬಿಡುಗಡೆ ಸಮಾರಂಭ
ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ 15 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದೀಪಾವಳಿಯ ಮುನ್ನಾ ದಿನವಾದ 19.10.2025, ಭಾನುವಾರದಂದು ಬೆಂಗಳೂರಿನಲ್ಲಿ ಸಾಹಿತ್ಯಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸುಮಧುರವಾದ ಪ್ರಾರ್ಥನೆಯ ನಂತರ ಹಿರಿಯ ಸಾಹಿತಿ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷರಾದ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯನವರ ಅಧ್ಯಕ್ಷತೆಯಲ್ಲಿ ಪುಸ್ತಕಗಳು ಬಿಡುಗಡೆಗೊಂಡವು.

ಪುಸ್ತಕ ಬಿಡುಗಡೆಯ ನಂತರ ಮಾತನಾಡಿದ ಶ್ರೀಯುತ ನಿಡಸಾಲೆ ಪುಟ್ಟಸ್ವಾಮಯ್ಯನವರು” ಇಂತಹ ಸಾಹಿತ್ಯದ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಬರಬೇಕು. ಯುವಜನರು ಸಾಹಿತ್ಯಾಸಕ್ತಿ ಬೆಳೆಸಿಕೊಂಡರೆ ಮಾತ್ರ ಸಾಹಿತ್ಯದ ಉಳಿವು ಹಾಗು ಘನ ಸರ್ಕಾರವು ಪುಸ್ತಕಗಳನ್ನು ಕೊಂಡು ಪ್ರಕಾಶಕರು ಮತ್ತು ಲೇಖಕರನ್ನು ಮುಕ್ತವಾಗಿ ಬೆಂಬಲಿಸಬೇಕು ಎಂದು ಅಭಿಪ್ರಾಯಪಟ್ಟರು”

‘ಹೊಸ ಬರಹಗಾರರ ಕೃತಿಗಳನ್ನು ಪ್ರಕಟಿಸುತ್ತಿರುವ ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ ಪ್ರಯತ್ನವು ಸ್ವಾಗತಾರ್ಹವಾಗಿದೆ. ಒಟ್ಟಿಗೆ 15 ಕೃತಿಗಳನ್ನು ಪ್ರಕಟಿಸುವುದು ಸುಲಭದ ಮಾತಲ್ಲ. ಅಂತಹ ಸಾಹಸವನ್ನು ಆಶಾ ರಘು ಅವರು ಮಾಡಿದ್ದಾರೆ’ ಎಂದು ಲೇಖಕಿ ಮೇಘನ ಸುಧೀಂದ್ರ ಅವರು ಅಭಿಪ್ರಾಯ ಹಂಚಿಕೊಂಡರೆ, ಪ್ರಕಟಣೆಯಾಗಿರುವ ಕೃತಿಗಳು ಒಂದಕ್ಕಿಂತಲೂ ಒಂದು ಭಿನ್ನವಾಗಿಯೂ, ಆಸಕ್ತಿದಾಯಕವೂ ಆಗಿವೆಯೆಂದು ಕೃತಿ ಪರಿಚಯ ಮಾಡಿದ ಲೇಖಕಿ ನಿವೇದಿತಾ ಎಚ್ ರವರು ಅಭಿಪ್ರಾಯಪಟ್ಟರು. ಪ್ರಕಾಶಕಿ ಹಾಗು ಸಾಹಿತಿ ಆಶಾ ರಘು ರವರು ಪ್ರಕಾಶಾನದಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು. ಲೇಖಕ ಪ್ರದೀಪ್ ಬೇಲೂರು ತಮ್ಮ ಕರೋನ ಕಾಲದಲ್ಲಿ ತಾವು ಅನುಭವಿಸಿದ ಅಭದ್ರತೆಯನ್ನು ನೆನಪಿಸಿಕೊಂಡು ತಮ್ಮ ಕಥಾಸಂಕಲನವನ್ನು ಪ್ರಕಟಿಸಿದಕ್ಕಾಗಿ ಆಶಾ ರಘು ರವರನ್ನು ಅಭಿನಂದಿಸಿದರು.

ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ ವತಿಯಿಂದ ಬಿಡುಗಡೆಗೊಂಡ ಪುಸ್ತಕಗಳಲ್ಲಿ ಏಳು ಲೇಖಕರ ಸಹಯೋಗದಿಂದ ರಚಿಸಲ್ಪಟ್ಟ “ಅದೃಶ್ಯ ಬೇರುಗಳು” ಎಂಬ ಖೋ ಕಾದಂಬರಿ ವಿಶೇಷ ಪ್ರಯತ್ನವಾಗಿತ್ತು. ಪರಸ್ಪರ ಖೋ ಕೊಟ್ಟುಕೊಂಡು ಕಾದಂಬರಿ ರಚಿಸಿದ ಏಳು ಲೇಖಕರು “ಉಷಾ ರಾಣಿ ಟಿ.ಎನ್, ಎಲ್.ಗಿರಿಜಾ ರಾಜ್ , ಶಂಕರ ರಾವ್ ಎನ್, ಸಿಂಧು ಹರಿತಸ್, ಗಾಯತ್ರಿ ಮೂರ್ತಿ, ಎಚ್.ವಿ. ಶ್ರೀಪ್ರಕಾಶ್, ರಘುರಾಂ ಎನ್.ವಿ.” ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರಕಾಶಕಿ ಹಾಗು ಸಾಹಿತಿ ಆಶಾ ರಘು ರವರನ್ನು ವೇದಿಕೆಯಲ್ಲಿ ಗೌರವಿಸಿದರು.

ಇದಲ್ಲದೆ ಡಾ. ಪ್ರದೀಪ್ ಬೇಲೂರು ಅವರ ಕಥಾ ಸಂಕಲನ ‘ಸುಡೋಕು’, ಶ್ರೀ ಸ.ಹರೀಶ್ ಅವರ ಕಥಾ ಸಂಕಲನ ‘ಅಮ್ಮ ಅಂದ್ರೆ ಭೂಮಿ’, ಆಶಾ ರಘು ಅವರ ‘ಹೂಮಾಲೆಯಾದ ಆಂಡಾಳು’ ಎಂಬ ತಿರುಪ್ಪಾವೈ ಸಹಿತವಾದ ನೀಳ್ಗತೆ ಲೋಕಾರ್ಪಣೆಗೊಂಡಿತು. ಇದರೊಂದಿಗೆ ಹಂದಲಗೆರೆ ಗಿರೀಶ್ ಅವರ ಎರಡು ಮರುಮುದ್ರಣದ ಕವನ ಸಂಕಲನಗಳು ಹಾಗೂ ಆಶಾ ರಘು ಅವರ ಒಂಬತ್ತು ಮರುಮುದ್ರಣದ ಕೃತಿಗಳು ಸಹ ಮರುಬಿಡುಗಡೆಗೊಂಡವು.

ಕಾರ್ಯಕ್ರಮದಲ್ಲಿ ಉಪಾಸನ ಬುಕ್ಸ್ ವತಿಯಿಂದ ಸಮನ್ವಯ ಸಮಿತಿಯ ಶ್ರೀ ರವೀಂದ್ರ ರವರನ್ನು ಆದರದಿಂದ ಗೌರವಿಸಲಾಯಿತು.
ಬಿಡುಗಡೆಗೊಂಡ ಎಲ್ಲಾ ಪುಸ್ತಕಗಳ ಲೇಖಕರು, ಬುಕ್ ಉಪಾಸನ ಬುಕ್ಸ್ ಬಳಗ ಹಾಗು ಬುಕ್ ಬ್ರಹ್ಮ ತಂಡ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಓಡಾಡಿ ಹಬ್ಬದ ಕಳೆ ಸಭಾಂಗಣದಲ್ಲಿ ಮೂಡಿತ್ತು.
ಸಾಹಿತ್ಯಮೈತ್ರಿ ತಂಡ