ಕಾಗೆಯ ಗುಣಾವಲೋಕನ

ಕಾಗೆಯ ಗುಣಾವಲೋಕನ

ಕಾಗೆಯ ಕೆಲವು ಗುಣಗಳನ್ನು ಅಳವಡಿಸಿಕೊಂಡರೆ ಯಶಸ್ಸನ್ನು ಗಳಿಸಬಹುದು.

ಜಗತ್ತಿನಲ್ಲಿ ಹಲವು ವಿಧದ, ಬಣ್ಣದ, ರೂಪದ, ಗಾತ್ರದ ಪಕ್ಷಿಗಳಿದ್ದು, ಅವೆಲ್ಲದರ ಪೈಕಿ ಅತ್ಯಂತ ಹೆಚ್ಚು ಅನಾದರಕ್ಕೆ ಒಳಗಾದ ಪಕ್ಷಿಯೆಂದರೆ ಕಾಗೆ. ಬಣ್ಣದಲ್ಲಿ ಕಪ್ಪು, ಕೂಗಿನಲ್ಲಿ ಕರ್ಕಶ ಇವೆಲ್ಲಾ ಕಾರಣಗಳಿಂದ ಮನುಷ್ಯನಿಗೆ ಕಾಗೆಗಳೆಂದರೆ ಅಷ್ಟಕ್ಕಷ್ಟೇ. ಜಗತ್ತಿನ ಜೀವವಿಜ್ಞಾನಿಗಳು ಮತ್ತು ಮಹಾನ್ ಆಡಳಿತಗಾರನಾದ ಚಾಣಕ್ಯ ಹೇಳುವಂತೆ ಮನುಷ್ಯನು ಕಾಗೆಯನ್ನು ನೋಡಿಕೊಂಡು ಅದರಿಂದ ಕಲಿಯಬೇಕಾಗಿರುವುದು ಬಹಳಷ್ಟು ವಿಚಾರಗಳಿವೆ. ಅದರಲ್ಲೂ ಮುಖ್ಯವಾಗಿ ಕಾಗೆಯಲ್ಲಿ ಇರುವ ಯಶಸ್ಸಿನ ಗುಣಗಳನ್ನು ಎಲ್ಲರೂ ಕಲಿಯಲೇಬೇಕು.

ಕಾಗೆಯಿಂದ ಕಲಿಯಬೇಕಾದ ಮೊದಲನೆಯ ಗುಣವೆಂದರೆ ಎಲ್ಲೂ ಕಾಗೆಯು ಬಹಿರಂಗವಾಗಿ ಮಿಲನವನ್ನು ನಡೆಸುವುದಿಲ್ಲ ಮತ್ತು ಅದನ್ನು ತೀರಾ ಗುಪ್ತವಾಗಿರಿಸುತ್ತದೆ. ಮನುಷ್ಯ ಇದನ್ನು ಸರಿಯಾಗಿ ಅರಿತುಕೊಂಡರೆ ಮತ್ತು ಅದರ ಮೌಲ್ಯವನ್ನು ಅರಿತರೆ ಆತನಿಗೆ ಸಮಾಜದಲ್ಲಿ ಅಪಾರ ಗೌರವ ಪ್ರಾಪ್ತಿಯಾಗುತ್ತದೆ. ‘ಅನ್ನದ ಅಗುಳೊಂದ ಕಂಡರೆ ಕೂಗಿ ಕರೆಯದೇ ಕಾಗೆಯೊಂದು ತನ್ನ ಬಳಗವನ್ನು’ ಎಂಬ ಮಾತೇ ಇರುವಂತೆ ಕಾಗೆಯು ಒಂದು ತುತ್ತು ಆಹಾರ ಸಿಕ್ಕರೂ ಅದನ್ನು ತನ್ನ ಬಳಗದೊಂದಿಗೆ ಹಂಚಿಕೊಂಡು ತಿನ್ನುತ್ತದೆ. ಒಂದು ಅಗುಳು ಅನ್ನದ ಮೌಲ್ಯ ಹಾಗೂ ಹಸಿವಿನ ಬೆಲೆ ಕಾಗೆಗೆ ಚೆನ್ನಾಗಿ ತಿಳಿದಿದೆ. ಹಾಗಾಗಿ ತನಗೆ ಏನಾದರೂ ತಿನ್ನಲು ಸಿಕ್ಕರೆ ತಕ್ಷಣ ಅದು ತನ್ನ ಬಳಗವನ್ನೆಲ್ಲಾ ಕೂಗಿ ಕರೆದು ಅದನ್ನು ಹಂಚಿಕೊಂಡು ತಿನ್ನುತ್ತದೆ. ಆದರೆ ಮನುಷ್ಯನು ಸ್ವಾರ್ಥ ಜೀವಿಯಾಗಿದ್ದು, ತನಗೇನಾದರೂ ಸಿಕ್ಕರೆ ಅದು ತನಗೊಬ್ಬನಿಗೇ ಸೇರಬೇಕು ಎನ್ನುವ ಲಾಲಸೆಯ ಗುಣಕ್ಕೆ ಬದಲಾಗಿ ಎಲ್ಲರಿಗೂ ಹಂಚಿ ತಿನ್ನುವಂತಹ ವಿಭಿನ್ನವಾದ ಗುಣವನ್ನು ಹೊಂದಬೇಕು.

ಕಾಗೆಯ ಇನ್ನೊಂದು ವಿಶೇಷ ಗುಣವೆಂದರೆ ತನ್ನ ಶತ್ರುಗಳು ಯಾರಾದರೂ ತನ್ನ ಮೇಲೆ, ತನ್ನ ಮನೆಯ ಮೇಲೆ ಅಥವಾ ತನ್ನ ಕುಟುಂಬದ ಮೇಲೆ ಧಾಳಿಯನ್ನು ಮಾಡಿದರೆ ಅಥವಾ ಧಾಳಿ ಮಾಡುವ ಮುನ್ಸೂಚನೆ ದೊರೆತರೆ ಶತ್ರುಗಳ ಮೇಲೆ ಏಕಾಂಗಿಯಾಗಿಯೂ ಪ್ರತಿಯಾಗಿ ಧಾಳಿ ನಡೆಸಿ ಅವರನ್ನು ಬಿಟ್ಟೂಬಿಡದೆ ಕಾಡಿ ಹೈರಾಣಾಗಿಸುತ್ತದೆ. ತನ್ನ ಹಾಗೂ ತನ್ನ ಕುಟುಂಬದ ರಕ್ಷಣೆಗೆ ತನಗೆ ಅಪಾಯವಿದ್ದರೂ ಕಾಗೆಯು ಭೀತಿಗೊಳ್ಳದೇ ಧೈರ್ಯದಿಂದ ಎದುರಾಳಿಯನ್ನು ಹಿಮ್ಮೆಟ್ಟಿಸುತ್ತದೆ. ಮನುಷ್ಯನೂ ಬದುಕಲ್ಲಿ ಎಂತಹ ಪರಿಸ್ಥಿತಿ ಬಂದರೂ ಧೈರ್ಯದಿಂದ ಅದನ್ನು ಎದುರಿಸುವಂತಹ ಮನೋಧೈರ್ಯವನ್ನು ಹೊಂದಬೇಕು. ಅದೇ ರೀತಿ ಕಾಗೆಯಲ್ಲಿರುವ ಮತ್ತೊಂದು ಗುಣವೆಂದರೆ ತನ್ನ ಬಳಿ ಇರುವ ಯಾವುದೇ ವಸ್ತುಗಳನ್ನು ಅದು ಬಹಳ ಜಾಗರೂಕತೆಯಿಂದ ಕಾಪಾಡಿಕೊಳ್ಳುತ್ತದೆ. ಕಾಗೆಯು ಯಾವುದೇ ವಸ್ತುವೂ ವ್ಯರ್ಥವಾಗಿ ಹಾಳಾಗಬಾರದು ಎಂದು ಅದನ್ನು ಅತ್ಯಂತ ಜತನದಿಂದ ಕಾಪಾಡಿಕೊಳ್ಳುತ್ತದೆ. ಅದೇ ರೀತಿ ಮನುಷ್ಯನೂ ಯಾವುದೇ ವಸ್ತುವನ್ನು ನಿರುಪಯುಕ್ತವೆಂದು ಕಸದ ಬುಟ್ಟಿಗೆ ಎಸೆಯುವ ಮೊದಲು ಹಲವು ಬಾರಿ ಯೋಚಿಸಬೇಕು ಮತ್ತು ಅದರ ಮರುಬಳಕೆಯ ಕುರಿತು ಕಾಳಜಿವಹಿಸಬೇಕು.

ಕಾಗೆಯ ಮತ್ತೊಂದು ಅದ್ಭುತವಾದ ಗುಣವೆಂದರೆ ಅದು ಯಾವತ್ತೂ ಮೈಮರೆತು ಇರದೇ ಸದಾ ಜಾಗೃತ ಸ್ಥಿತಿಯಲ್ಲಿ ಇರುತ್ತದೆ. ತನ್ನ ಮೇಲೆ ಯಾವ ದಿಕ್ಕಿನಿಂದ ಆಕ್ರಮಣ ನಡೆದರೂ ಅದನ್ನು ಎದುರಿಸಲು ಸದಾ ಜಾಗೃತ ಸ್ಥಿತಿಯಲ್ಲೇ ಇರುತ್ತದೆ ಮತ್ತು ತನ್ನ ಶತ್ರುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುತ್ತದೆ. ಅದೇ ರೀತಿ ಮನುಷ್ಯನು ತನ್ನ ಸುತ್ತಮುತ್ತ ಇರುವ ಶತ್ರುಗಳು ಮತ್ತು ಸ್ನೇಹಿತರ ಕುರಿತು ಎಚ್ಚರಿಕೆಯಿಂದ ಇರಬೇಕು. ಕಾಗೆಯು ಯಾರನ್ನೂ ಅತಿಯಾಗಿ ನಂಬದೇ ಇರುವ ಪಕ್ಷಿ, ಕಾಗೆಯು ತನಗೆ ತಾನೆ ಸಾಟಿ ಎನ್ನುವಂತೆ ಸ್ವಸಾಮರ್ಥ್ಯವನ್ನು ನಂಬಿಕೊಂಡು ಜೀವಿಸುತ್ತದೆ. ಮನುಷ್ಯನೂ ಇದೇ ರೀತಿ ಎಲ್ಲಾ ವಿಚಾರಗಳಲ್ಲೂ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಈ ವಿಶಿಷ್ಟ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸಿನೆಡೆಗೆ ಸಾಗಬಹುದು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198

Related post