ನೇತಾಜಿಯ ಮಹಾ–ಪಯಣ

ನೇತಾಜಿಯ ಮಹಾ–ಪಯಣ

‘ಸ್ವತಂತ್ರ ಭಾರತದ ನನ್ನ ಕನಸು ನನ್ನನ್ನು ಇಲ್ಲಿ ಕರೆತಂದಿದೆ, ಬ್ರಿಟೀಷರಿಗೆ ಪಾಠ ಕಲಿಸಲು ಜರ್ಮನಿ, ಇಟಲಿ ಮತ್ತು ಜಪಾನ್‌ನಂತಹ ಸ್ನೇಹಿತ ರಾಷ್ಟ್ರಗಳ ಬೆಂಬಲ ಬೇಕು, ಸ್ವಾತಂತ್ರಕ್ಕಾಗಿ ನಮ್ಮ ರಕ್ತವನ್ನು ಚೆಲ್ಲಲು ನಾವು ಸಿದ್ಧರಿದ್ದೇವೆ’

ಸುಭಾಷ್ ಚಂದ್ರ ಬೋಸ್

ಬ್ರಿಟೀಷರ ಕಣ್ತಪ್ಪಿಸಿ ಜಗತ್ತು ಕಂಡ ವಿಲಕ್ಷಣ ದಂಡನಾಯಕ, ಪರಮ ಕ್ರೂರಿ, ನಾಜಿ ನಾಯಕ ‘ಅಡಾಲ್ಫ್ ಹಿಟ್ಲರ್’ನೊಂದಿಗೆ ಸುಭಾಷ್ ಚಂದ್ರ ಬೋಸ್ ಸ್ನೇಹ ಹಸ್ತ ಚಾಚುತ್ತಾರೆ, ಮಹಾಯುದ್ಧದಲ್ಲಿ ಜರ್ಮನಿ ಬ್ರಿಟಿಷರ ಪರಮ ವೈರಿ ಎಂಬ ಒಂದೇ ಕಾರಣಕ್ಕೆ ನೆರವು ದೊರಕೀತೆಂದು ಸುಭಾಷ್ ಜರ್ಮನಿಯಲ್ಲಿ ಹಿಟ್ಲರ್ ನನ್ನು ಭೇಟಿಯಾಗುತ್ತಾರೆ. ಈ ಮಹಾಪಯಣಕ್ಕಿದ್ದ ಈ ಅದ್ಬುತ ಯೋಜನೆ ಬ್ರಿಟಿಷರಲ್ಲಿ ನಡುಕ ಹುಟ್ಟಿಸಿತ್ತು. ಅದರ ವಿವರ ಓದಿದರೆ ಎಂತವರಿಗೂ ಮೈ ಜುಮ್ ಎನ್ನುತ್ತದೆ.

1941ರ ಶಿಶಿರ ಋತುವಿನ ಜನವರಿಯ ಒಂದು ದಿನ, ಬಹಳ ದಿನಗಳಿಂದ ರಚಿಸಿದ ಯೋಜನೆಯನ್ನು ಸುಭಾಷರು ಕಾರ್ಯರೂಪಕ್ಕೆ ತರಲೇಬೇಕಿತ್ತು. ಸೆರೆಮನೆಯಲ್ಲಿ ಮಾಡಿದ ಏಳು ದಿನಗಳ ಉಪವಾಸದ ಪರಿಣಾಮವಾಗಿ ಸುಭಾಷ್‌ರನ್ನು ಬ್ರಿಟಿಷ್ ಸರ್ಕಾರವು ಕಲ್ಕತ್ತಾ ಜೈಲಿನಿಂದ ಎಲ್ಗಿನ್ ರಸ್ತೆಯ ಸುಭಾಷ್‌ರ ನಿವಾಸದಲ್ಲೇ ಗೃಹಬಂಧನದಲ್ಲಿ ಇಟ್ಟಿತ್ತು. ಪೋಲೀಸರ ಬಿಗಿಯಾದ ಕಾವಲಿದ್ದ ಆ ಮನೆಗೆ ಹೋಗಿಬರುವವರು, ನೆಂಟರು, ಕೆಲಸದವರು, ಅಪರಿಚಿತರು ಹಾಗು ವಿಳಾಸಕ್ಕೆ ಬರುತಿದ್ದ ಪತ್ರಗಳೆಲ್ಲದರ ಮೇಲೆ ಪೊಲೀಸ್ ಪಡೆಯ ಹದ್ದಿನ ಕಾವಲಿತ್ತು. ಒಂದು ತಿಂಗಳು ಹೊರಗೆ ಏನೂ ತಿಳಿಯದ ಹಾಗೆ ಸುಭಾಷ್ ತನ್ನ ಸೋದರಳಿಯ ‘ಸಿಸಿರ್’ ಜೊತೆಗೆ ಯೋಜನೆ ಒಂದನ್ನು ರೂಪಿಸಿದ್ದರು. ಮನೆಗೆ ಪೊಲೀಸ್ ಪಡೆ ಅಷ್ಟೇ ಅಲ್ಲದೆ ಬ್ರಿಟಿಷ್ ಸರ್ಕಾರದ ಗುಪ್ತಚರರೂ ಮಾರುವೇಷದಲ್ಲಿ ಕಾವಲಿದ್ದರು. ಗೃಹಬಂಧನದಲ್ಲಿ ಇದ್ದಾಗಿನಿಂದಲೇ ಸುಭಾಷರು ತಮ್ಮ ಮುಖ ಚೌರವನ್ನು ಮಾಡದೆ ದಟ್ಟವಾದ ಗಡ್ಡವನ್ನು ಬಿಟ್ಟಿದ್ದರು. ಮನೆಗೆ ಬರುತ್ತಿದ್ದ ತನ್ನ ಆಪ್ತರ ನೆರವಿನಿಂದ ಈಗಿನ ಪಾಕಿಸ್ತಾನದ ಪೇಷಾವರದಲ್ಲಿದ್ದ ತಮ್ಮ ಪಾರ್ಟಿಯ ಸದಸ್ಯರಾದ ‘ಮಿಯಾನ್ ಅಕ್ಬರ್ ಶಾಹ್’ ವಿಳಾಸಕ್ಕೆ ನೆರವಿಗಾಗಿ ಟೆಲಿಗ್ರಾಂ ಕಳಿಸಿದ್ದರು.

ಸೋದರಳಿಯ ಸಿಸಿರ್ BLA –7169 ನೋಂದಣಿ ಸಂಖ್ಯೆಯ ಪುಟ್ಟ ಕಾರೊಂದನ್ನು ಎರಡು ವಾರದ ಮುಂಚೆಯೇ ಖರೀದಿಸಿ ಅದನ್ನು ‘ಬುರ್ದ್ವಾನ್’ ಜಿಲ್ಲೆಯಲೆಲ್ಲಾ ತಿರುಗಾಡಿ ಪರೀಕ್ಷಿಸಿದ್ದರು. ಆ ಕಾರು ಗಂಟೆಗೆ 108 ಕಿ.ಮೀ ವೇಗದಲ್ಲಿ ಚಲಿಸುವಂತದ್ದಾಗಿತ್ತು. ಆ ಕಾರಲ್ಲಿ ಸಿಸಿರ್ ಸುಭಾಷ್‌ರ ಮನೆಗೆ ರಾತ್ರಿ ಆಗಮಿಸಿದಾಗ ಪೋಲೀಸರ ಪ್ರಶ್ನೆಗೆ ತನ್ನ ಮಾವ ಎರಡನೇ ಮಹಾಯುದ್ಧದ ವಾರ್ತೆಯನ್ನು ಕೇಳಬೇಕಾಗಿದೆ ಅದಕ್ಕಾಗಿ ನಾನು ಬಂದಿರುವೆನೆಂದು ತಾನು ತಂದಿದ್ದ ರೇಡಿಯೋ ಒಂದನ್ನು ತೋರಿಸಿದನು. ಸಂದೇಹಿಸದೆ ಪೊಲೀಸರು ಸಿಸಿರ್‌ನ್ನು ಮನೆಯ ಒಳಗೆ ಬಿಟ್ಟಿದ್ದರು. ಸುಭಾಷ್ ಮತ್ತು ಸಿಸಿರ್ ಮುಂಚೆಯೇ ಹೊಂದಿಸಿಕೊಂಡಿದ್ದ ಪಠಾಣರ ವೇಷದಲ್ಲಿ ಜನವರಿ 16ರ ಮಧ್ಯರಾತ್ರಿ ಕಾವಲಿನವರ ಕಣ್ತಪ್ಪಿಸಿ ಕಾರಿನೊಳಗೆ ಕುಳಿತರು. ತುಂಬಾ ಚಿಕ್ಕದಾದ ಆ ಕಾರನ್ನು ಸಿಸಿರ್ ಎರಡು ವಾರದ ಮುಂಚೆಯೇ ಓಡಿಸಿ ಪರೀಕ್ಷಿಸಿ ಇಟ್ಟಿಕೊಂಡಿದ್ದರು. ಕಾರಿನೊಳಗೆ ಕುಳಿತ ನಂತರ ಮೇಲಕ್ಕೆ ತೆಗೆದಿದ್ದ ಎರಡು ಬಾಗಿಲುಗಳನ್ನು ಹಾಕುವಾಗ ಸದ್ದು ಬರಬಹುದೆಂದು ಬಾಗಿಲನ್ನು ಮುಚ್ಚದೇ (ಮುಚ್ಚಿಯೂ ಮುಚ್ಚದ ಸ್ಥಿತಿಯಲ್ಲಿ) ಕಾರನ್ನು ಸ್ಟಾರ್ಟ್ ಮಾಡಿ ಸ್ವಲ್ಪ ದೂರ ಕ್ರಮಿಸಿದ ಮೇಲೆಯೇ ಇಬ್ಬರು ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಂಡಿದ್ದರು.

ಅಲ್ಲಿಂದ ಹೊರಟ ಕಾರು ಸುಭಾಷರ ಸಂಬಂಧಿಗಳಾದ ಅಶೋಕ್‌ನಾಥ್ ಮತ್ತು ಮಿರಾ ಬೋಸ್‌ ರ ಮನೆಯ ಬಳಿ ನಿಂತಿತು. ಅಶೋಕ್‌ನಾಥ್ ಹಾಗೂ ಮಿರಾ ಬೋಸರು ಸಿಸಿರ್‌ ನನ್ನು ಗುರುತಿಸಿ, ಸುಭಾಷ್‌ ರನ್ನು ಗುರುತಿಸದೇ ಸಿಸಿರ್ ಕರೆತಂದ ಅಥಿತಿಯೆಂದು ಭಾವಿಸಿ ಅವರುಗಳ ಜೊತೆ ಊಟವನ್ನೂ ಮುಗಿಸಿದರು. ಸಿಸಿರ್ ಅವರಿಬ್ಬರನ್ನು ತಮ್ಮ ಜೊತೆ ಕಾರಿನಲ್ಲಿ ಕರೆದುಕೊಂಡು ಹೋಗುವಾಗಲೇ ದಾರಿ ಮಧ್ಯೆ ಮುಂದಿನ ಸೀಟಲ್ಲಿ ಕೂತಿರುವವರು ಸುಭಾಷ್‌ಚಂದ್ರ ಬೋಸರೆಂದು ಇಬ್ಬರಿಗೂ ಗೊತ್ತಾಗಿದ್ದು. ಎಲ್ಲೂ ನಿಲ್ಲದೆ ಕಾರು ನೇರವಾಗಿ ‘ಗೊಮೊಹ್’ ರೈಲು ನಿಲ್ದಾಣಕ್ಕೆ ಬಂದು ತಲುಪಿತು. ಸಿಸಿರ್‌ಗೆ ತಾನು ಸುಭಾಷ್‌ರನ್ನು ಯಾರಿಗೂ ತಿಳಿಯದಂತೆ ದೆಹಲಿಗೆ ತೆರಳುವ ಕಲ್ಕಾ ಮೇಲ್ ರೈಲಿಗೆ ಹತ್ತಿಸಬೇಕೆಂದು ಅಷ್ಟೇ ತಿಳಿದಿತ್ತು. ಮುಂದಿನ ವಿವರ ಸುಭಾಷ್ ರಿಗಷ್ಟೇ ಗೊತ್ತಿತ್ತು.

ಅಲ್ಲಿಂದ ಮುಂದೆ ಸುಭಾಷ್ ದೆಹಲಿಗೆ ಪಯಾಣಿಸಿದ್ದು ಒಂಟಿಯಾಗಿ. ದೆಹಲಿಯನ್ನು ತಲುಪಿ ಅಲ್ಲಿಂದ ಪೇಷಾವರ ತಲುಪಿದ ಸುಭಾಷರು ಕಾಬುಲ್ ಮೂಲಕ ಮಾಸ್ಕೋ (ರಷ್ಯಾ) ತಲುಪಬೇಕಿತ್ತು. ಪೇಶಾವರದಲ್ಲಿ ಇಳಿದುಕೊಂಡ ಸುಭಾಷರು ಮುಂಚೆಯೇ ಟೆಲಿಗ್ರಾಂ ಕೊಟ್ಟಿದಂತೆ ಅಲ್ಲಿ ‘ಮಿಯಾನ್ ಅಕ್ಬರ್ ಶಾಹ್’ನನ್ನು ಭೇಟಿಯಾಗಿ ಅವರ ನೆರವಿನಿಂದ ಕಾಬೂಲ್‌ಗೆ ಪ್ರಯಾಣಿಸಿದರು. ಕಾಬುಲ್ ಪ್ರಯಾಣದುದ್ದಕ್ಕೂ ಪಶ್ತೂನಿಗಳು ಇರುವುದರಿಂದ ಸುಭಾಷ್‌ರಿಗೆ ಅವರ ಭಾಷೆಯು ತೊಡಕಾಗಿ ಬ್ರಿಟೀಷ್ ಸರ್ಕಾರಕ್ಕಾಗಿ ಕೆಲಸ ಮಾಡುವ ಪಸ್ತೂನಿಗಳು ಕಂಡುಹಿಡಿದು ಬಿಡಬಹುದೆಂದು ಮಿಯಾನ್ ಅಕ್ಬರ್ ಶಾಹ್ ಸುಭಾಷರಿಗೆ ಕಿವುಡ ಮತ್ತು ಮೂಕರಂತೆ ನಟಿಸಿ ಪ್ರಯಾಣಿಸಬೇಕೆಂದು ಉಪಾಯ ಸೂಚಿಸಿದ್ದರು. ಅವರ ಸಲಹೆಯಂತೆ ಸುಭಾಷರು ಕಾಬುಲ್‌ ನತ್ತ ಬೇಗ ಪ್ರಯಾಣಿಸಿದರೂ ಅಲ್ಲಿಂದ ಮಾಸ್ಕೋಗೆ ತೆರಳಲು 48 ದಿನಗಳ ಕಾಲ ಕಾಯಬೇಕಾಯಿತು. ಅಲ್ಲಿಯವರೆಗೂ ಕಾಬೂಲಿನ ಶೋರ್ ಬಜಾರ್ ಎಂಬ ಪ್ರದೇಶದಲ್ಲಿನ ಒಂದು ಮನೆಯಲ್ಲಿ ತಾನು ಒಬ್ಬ ಇನ್ಶೂರೆನ್ಸ್ ಏಜೆಂಟ್ ಎಂದೂ ತನ್ನ ಹೆಸರು ಜಿಯಾಉದ್ದೀನ್ ಎಂದು ಪರಿಚಯಿಸಿಕೊಂಡು ಕಾಲ ಕೆಳೆದಿದ್ದರು. ನಂತರ ಸುಭಾಷರು ಅಗಾಖಾನ್ (ಆಲ್ ಇಂಡಿಯಾ ಮುಸ್ಲಿಂ ಲೀಗ್‌ನ ಅಧ್ಯಕ್ಷ) ನೆರವಿನಿಂದ ‘ಕೌಂಟ್ ಒರ್ಲ್ಯಾಂಡೊ ಮಝೊಟ್ಟಾ’ ಎಂಬ ನಕಲಿ ಹೆಸರಿನಲ್ಲಿ ಇಟಾಲಿಯನ್ ಪಾಸ್‌ಪೋರ್ಟ್ ಸಂಪಾದಿಸಿ ಮಾಸ್ಕೋ ನಗರಕ್ಕೆ ತೆರಳಿದರು. ಬ್ರಿಟೀಷರು ಯಾವತ್ತಿದ್ದರೂ ರಷ್ಯಾಕ್ಕೆ ಹಳೆಯ ವೈರಿಯಾದ್ದರಿಂದ ರಷ್ಯಾ ಬ್ರಿಟಿಷರ ವಿರುದ್ಧ ಹೋರಾಡಲು ನೆರವು ನೀಡುತ್ತದೆ ಎನ್ನುವುದು ಸುಭಾಷರ ಊಹೆಯಾಗಿತ್ತು, ಆದರೆ ಸುಭಾಷ್ ನಿರೀಕ್ಷಿಸಿದ್ದ ನೆರವು ರಷ್ಯಾದಲ್ಲಿ ಸಿಗದಿದ್ದ ಕಾರಣ ಅಲ್ಲಿನ ಜರ್ಮನ್‌ನ ದೂತವಾಸಕ್ಕೆ ಭೇಟಿ ನೀಡಿ ಅಲ್ಲಿನ ರಾಯಭಾರಿ ‘ಕೌಂಟ್ ವಾನ್ ಡೆರ್ ಸ್ಚುಲೆನ್ಬರ್ಗ್’ ನೆರವಿನಿಂದ ವಿಶೇಷ ವಿಮಾನದಲ್ಲಿ ಬರ್ಲಿನ್ ತಲುಪಿದರು.

ಬರ್ಲಿನ್ ತಲುಪಿದ ನಂತರ ಹಿಟ್ಲರ್ ನನ್ನು ಭೇಟಿಯಾಗಲು ಸುಭಾಷ್ ತನ್ನೆಲ್ಲಾ ಸಂಪರ್ಕಗಳನ್ನು ಬಳಸಬೇಕಾಯಿತು. ಸುಭಾಷರು ತಮ್ಮ ಪತ್ನಿ ಎಮಿಲಿ ತಿಳಿಸಿದಂತೆ ತಮ್ಮೊಂದಿಗೆ ಕೊಂಡೊಯ್ದಿದ್ದ ಬುದ್ಧನ ಚಿಕ್ಕ ಪ್ರತಿಮೆಯೊಂದನ್ನು ಉಡುಗೊರೆಯಾಗಿ ಹಿಟ್ಲರ್‌ಗೆ ಕೊಟ್ಟರು. ಹಿಟ್ಲರ್ ಅಚ್ಚರಿಯಿಂದ ಸುಮಾರು ಹೊತ್ತು ಅದನ್ನು ದಿಟ್ಟಿಸಿನೋಡಿ ಯಾರು ಈ ‘ಕುಸ್ತಿಪಟು’ ಎಂದು ನಗೆಯಾಡಿದನು. ಆದರೆ ಸುಭಾಷರು ಬುದ್ಧ ಹಾಗು ಆತನ ಶಾಂತಿ ಮತ್ತು ಅಹಿಂಸಾ ತತ್ವದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದರು. ಆಗ ಹಿಟ್ಲರ್ ‘ಶಾಂತಿ? ಅಹಿಂಸಾ? ಹಾಗಾದರೆ ಈ ಮಹಾನುಭಾವರು ಗಾಂಧಿಯವರಿಗಿಂತ ಹಿರಿಯರೋ ಕಿರಿಯರೋ?’ ಎಂದು ತನ್ನ ಕೈಯಲ್ಲಿದ್ದ ಆಕೃತಿಯನ್ನು ಪರೀಕ್ಷಿಸುತ್ತಾ ಕೇಳಿದನು. ಆಗ ಸುಭಾಷರು ಗೌತಮ ಬುದ್ಧರು ನಮ್ಮೆಲರಿಗಿಂತ ಹಿರಿಯರು ಎಂದು ನಗುತ್ತ ಉತ್ತರಿಸಿದ್ದರು. ಸುಭಾಷರು ‘ಸ್ವತಂತ್ರ ಭಾರತದ ನನ್ನ ಕನಸು ನನ್ನನ್ನು ಇಲ್ಲಿ ಕರೆತಂದಿದೆ, ಬ್ರಿಟೀಷರಿಗೆ ಪಾಠ ಕಲಿಸಲು ಜರ್ಮನಿ, ಇಟಲಿ ಮತ್ತು ಜಪಾನ್‌ನಂತಹ ಸ್ನೇಹಿತ ರಾಷ್ಟ್ರಗಳ ಬೆಂಬಲ ಬೇಕು, ಸ್ವಾತಂತ್ರಕ್ಕಾಗಿ ನಮ್ಮ ರಕ್ತವನ್ನು ಚೆಲ್ಲಲು ನಾವು ಸಿದ್ಧರಿದ್ದೇವೆ’ ಎಂದು ತಿಳಿಸುತ್ತಾರೆ. ಆಗ ಹಿಟ್ಲರ್ ಸುಭಾಷರಿಗೆ, ‘ಭಾರತೀಯರ ಚೈತನ್ಯವು ಅಸ್ತವ್ಯಸ್ತವಾಗಿದೆ, ನಿಮ್ಮಲಿರುವ ಸಂಪತ್ತು ನನ್ನಲ್ಲಿದ್ದಿದ್ದರೆ ನಾನು ಅಲೆಕ್ಸಾಂಡರ್‌ನಂತೆ ಜಗತ್ತನ್ನೇ ಆಳುತ್ತಿದ್ದೆ’ ಎನ್ನುತ್ತಾನೆ. ಆಗ ಸುಭಾಷರು ‘ಸರ್ ಬ್ರಿಟೀಷರು ನನ್ನ ದೇಶವನ್ನು ಕಬ್ಬಿಣದ ಸರಳಿನ ಹಿಂದೆ ಬಂಧಿಸಿದ್ದಾರೆ ನಿಜ, ಆದರೆ ಆ ಸರಳುಗಳನ್ನು ಬೇಧಿಸುತ್ತ ಯುವಕನೊಬ್ಬ ಜಗತ್ತಿನ ಶ್ರೇಷ್ಠ ಕಮಾಂಡರ್‌ ನ ಮುಂದೆ ನಿಂತಿರುವ ಸಮಯದಲ್ಲಿ ಅದು ಹೇಗೆ ನೀವು ಹಾಗೆ ಆರೋಪಿಸುತ್ತೀರಿ’ ಎಂದು ಮರ್ಮಿಕವಾಗಿ ಉತ್ತರಿಸುತ್ತಾರೆ. ಆಗ ಹಿಟ್ಲರ್ ಸುಭಾಷರ ಧೈರ್ಯ ಹಾಗೂ ಕೆಚ್ಚಿನ ಮಾತುಗಳನ್ನು ಕೇಳಿ ಅಚ್ಚರಿಗೆ ಒಳಗಾಗಿ ಮೆಚ್ಚಿ ಮುಂದಿನ ಸುದೀರ್ಘ ಸಭೆಯ ನಂತರ ಹಿಟ್ಲರ್ ತನ್ನ ಸಂಪೂರ್ಣ ಬೆಂಬಲವನ್ನು ಸುಭಾಷ್‌ ರಿಗೆ ಘೋಷಿಸಿದನು.

ಎರಡನೇ ಮಹಾಯುದ್ಧದಲ್ಲಿ ಜರ್ಮನ್ ವಿರುದ್ಧ ಹಾಗೂ ಬ್ರಿಟಿಷರ ಪರವಾಗಿ ಯುದ್ಧ ಮಾಡುತಿದ್ದ 4,500 ಭಾರತೀಯ ಸೈನಿಕರನ್ನು ಜರ್ಮನ್ ಸೆರೆ ಹಿಡಿದಿತ್ತು. ಆಗ ಸುಭಾಷರು ಹಿಟ್ಲರನ್ನು ಒಪ್ಪಿಸಿ ಅವರೆಲ್ಲರನ್ನು ಬಿಡಿಸಿಕೊಂಡು ಇಂಡಿಯನ್ ಲೀಗ್ ನ ಸೈನಿಕ ಪಡೆ ಸ್ಥಾಪಿಸಿದರು. ನಂತರ ಸಿಂಗಾಪುರಕ್ಕೆ ತೆರಳಿ ಜಪಾನ್ ದೇಶದ ರಾಜತಾಂತ್ರಿಕ ನೆರವು ಪಡೆದು ಅಲ್ಲಿನ ಭಾರತೀಯ ಸೆರೆಯಾಳುಗಳನ್ನು ಬಿಡಿಸಿ ಅಕ್ಟೋಬರ್ 1943 ರಲ್ಲಿ ರಾಸ್ ಬಿಹಾರಿ ಬೋಸ್ ನೇತೃತ್ವದ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್‌ ಅನ್ನು ಒಟ್ಟುಗೂಡಿಸಿ ‘ಅಜಾದ್ ಹಿಂದ್ ಫೌಜ್’ (ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಥಾಪಿಸಿದರು. ಒಟ್ಟು 85,000 ಸೈನಿಕರ ಮಹಾ ಸೈನ್ಯದ ಬಲದೊಂದಿಗೆ ಸುಭಾಷರು ತಾತ್ಕಾಲಿಕ ಸರ್ಕಾರ ಸ್ಥಾಪಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ಯುದ್ಧ ಸಾರಿದರು.

ಸುಭಾಸ್‌ರ ಸೈನಿಕ ಪಡೆಯು ಅಂಡಮಾನ್ ದ್ವೀಪವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಮೊದಲ ಬಾರಿಗೆ ಭಾರತದ ಧ್ವಜವನ್ನು ಹಾರಿಸಿ ಅಂಡಮಾನನ್ನು ಭಾರತದ ಮೊದಲ ಸ್ವತಂತ್ರ ಪ್ರದೇಶವೆಂದು ಘೋಷಿಸಿದ್ದರು. ನಂತರ ಜಪಾನ್ ದೇಶದ ಜೊತೆ ಬ್ರಿಟಿಷರ ಮೇಲೆ ದಾಳಿ ಮಾಡುತ್ತಾ ಇಂಪಾಲ್ ಹಾಗು ಕೊಹಿಮಾ ಪ್ರದೇಶಗಳಲ್ಲಿ ವೀರಾವೇಷದಿಂದ ಕಾದಾಡುತ್ತಿತ್ತು, ಈ ವಿಜಯ ಇದೇ ರೀತಿ ಮುಂದುವರೆದಿದ್ದರೆ ಭಾರತದ ಸ್ವಾತಂತ್ರಾ ನಂತರದ ಭವಿಷ್ಯ ಬೇರೆಯೇ ಆಯಾಮ ಪಡೆಯುತಿತ್ತು. ಆದರೆ ಭಾರತೀಯರ ದೌರ್ಭಾಗ್ಯ! ಎರಡನೇ ಮಹಾಯುದ್ಧದಲ್ಲಿ ಮೈತ್ರಿ ಕೂಟದ ವಿಜಯದಿಂದ ಜರ್ಮನ್ ಸೋತು ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡನು. ನಂತರ ಜಪಾನ್ ಹಿರೋಷಿಮಾ ಹಾಗು ನಾಗಸಾಕಿ ನಗರಗಳ ಮೇಲಾದ ಅಣು ಬಾಂಬ್ ದಾಳಿಯಿಂದ ಶರಣಾಗಿ ಈ ಸಮಯದಲ್ಲಿ ಸುಭಾಷ್‌ರ ನಿಗೂಢ ಕಣ್ಮರೆ ವಿಮಾನ ಅಪಘಾತ ಎಂಬ ಕಥೆಯೊಂದಿಗೆ ಸುದ್ದಿಯಾಯಿತು. ಇಂದಿಗೂ ಭಾರತದ ಬಹುಪಾಲು ಜನರು ಸುಭಾಷ್‌ರ ಕಣ್ಮರೆಯನ್ನು ಸಾವೆಂದು ಒಪ್ಪುವುದಿಲ್ಲ. ಸುಭಾಷರ ಈ ಪ್ರಯಾಣವು 20ನೇ ಶತಮಾನ ಭಾರತ ಕಂಡ ‘ಮಹಾ ಪಯಣ’ ಎಂದೇ ಜನ ಮಾನಸದಲ್ಲಿ ಗುರುತಿಸಲ್ಪಟ್ಟಿದೆ. ಎಲ್ಲಾ ದೇಶಭಕ್ತರಿಗೂ ಹಾಗು ವೀರ ಸೈನಿಕರಿಗೂ ಸುಭಾಷ್ ಚಂದ್ರ ಬೋಸ್ ಸಾಹಸದ ಬದುಕು ಸ್ಪೂರ್ತಿಯಾಗಲಿ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post