ಯುಗಾದಿ ಪರ್ವದ ಲಾಸ್ಯ
ಯುಗಯುಗವದು ಕಳೆದರೂ
ಮತ್ತೆ ಮರಳಿ ಬಂದಿದೆ ಯುಗಾದಿ !
ಶಿಶಿರದ ಕೊರೆವ ಚಳಿಯನತ್ತ ಸರಿಸಿ..
ನೀಡಿದೆ ಜನರ ಬದುಕಲಿ ಹೊಸ ನಾಂದಿ !!
ನವಚೈತ್ರದಿ ಅರಳಿಹ ವನಸುಮವು
ಕೊಡುತಿಹುದು ಸವಿ ಪ್ರಕೃತಿಗೊಂದು ಬೆರಗು !
ಒಣಗಿಹ ಕಾನನವು ಮತ್ತೆ ಹಸಿರಲಿ ಕಂಗೊಳಿಸಿ..
ನೀಡಿದೆ ಅಂಧಕಾರದಲಿಹ ಜನಕೊಂದು ಬೆಳಗು !!
ಚೈತ್ರಮಾಸದಿ ಸಿಹಿಮಾವೊಂದೇ ಅರಳಲಿಲ್ಲ
ಜೊತೆಗೆ ಅರಳುತಿದೆ ಕಹಿ ತುಂಬಿದಾ ಬೇವು !
ಸಂತಸವೊಂದೇ ಜಗದಲಿಲ್ಲವೆಂಬ ನೀತಿಯಾ ಕಲಿಸಿ..
ವರದಾನದಿ ಕೊಟ್ಟಿದೆ ಬಾಳಲಿ ನೋವು – ನಲಿವು !!
ಚಿಗುರೆಲೆಗಳು ತೂಗಿ ಸಂತಸದಿ ನರ್ತಿಸಿವೆ
ವಸಂತಾಗಮನದ ಸವಿಸ್ಪರ್ಶದಲಿ !
ದೂರದ ಊರಲಿಹ ಮನಗಳು ಸಂಭ್ರಮಿಸಿವೆ..
ಹಬ್ಬದಾಚರಣೆಯ ಸಿಹಿ ಹರುಷದಲಿ !!
ದ್ವಾರದಲಿಹ ರಂಗವಲ್ಲಿ ಮಾವು-ಬೇವಿನ ತೋರಣವು
ಸ್ವಾಗತಿಸಿ ನಲಿದಿವೆ ಯುಗದ ಆದಿಯನು !
ನವಪೀಳಿಗೆಗೆ ಕಲಿಸಿವೆ ಈ ಸಡಗರವು..
ನಮ್ಮ ಸಂಸ್ಕಾರದ ಭದ್ರ ಬುನಾದಿಯನು !!
ಯುಗಾದಿಯು ನೀಡಿದೆ ಬದುಕಲಿ
ಹೊಸ ಪರ್ವದ ಹೊಸಲಾಸ್ಯದ ಆಶಾಕಿರಣ !
ಹೂವು – ಮುಳ್ಳಿನ ಬಾಳಿನಾ ಹಾದಿಯಲಿ..
ನವಭಾವದಲದ್ದಿದ ನವರಂಗಿನ ಚಿತ್ರಣ !!

ಸುಮನಾ ರಮಾನಂದ
ಮುಂಬೈ