ನಾಗರಪಂಚಮಿ

ನಾಗರಪಂಚಮಿ

ಜಗತ್ತಿನಾದ್ಯಂತ ನಾಗರಾಧನೆ ತನ್ನದೇ ಆದ ವೈವಿಧ್ಯ ವೈಶಿಷ್ಟ್ಯತೆಗಳನ್ನು ಶತಮಾನಗಳಿಂದಲೂ ಉಳಿಸಿ ಬೆಳೆಸಿಕೊಂಡು ಬಂದಿದೆ. ಪ್ರಕೃತಿಯ ಅವಿಭಾಜ್ಯ ಅಂಗವಾದ ಸರ್ಪವನ್ನು ಆರಾಧ್ಯ ದೈವವೆಂದು ಮಾನವ ಸ್ವೀಕರಿಸಿದ್ದರಿಂದ ಇಂದಿನವರೆಗೆ ನಡೆದು ಬಂದಿದೆ. ನಾಗದೇವರು ಪಿತೃದೇವತೆಗಳ ಪ್ರತಿರೂಪ. ಪ್ರಕೃತಿಯ ಶಕ್ತಿಗಳಲ್ಲಿ ದೈವತ್ವವನ್ನು ಕಾಣುವ ಮಾನವ ಹಾವುಗಳನ್ನು ಆರಾಧಿಸುತ್ತಾನೆ.

ನಮ್ಮ ಪ್ರಾಚೀನ ಋಷಿ ಮುನಿಗಳು ಪ್ರತಿಯೊಂದು ತಿಥಿಯೂ ಮಾಸ, ವರ್ಷವನ್ನು ಆಧರಿಸಿರುವಂತೆ ಮಾಡಿದ್ದರು. ಇದರಲ್ಲಿ ಪಂಚಮಿ ತಿಥಿಯೂ ಒಂದು. ಶ್ರಾವಣ ಮಾಸದ ಪಂಚಮಿ ತಿಥಿಯಂದು ನಾಗ ದೇವತೆಗಳನ್ನು ಆರಾಧಿಸಲಾಗುತ್ತದೆ. ನಾಗನು ಮೋಹ ನಿಯಂತ್ರಕನೂ ಹೌದು, ಮೋಹ ಸೃಷ್ಟಿಕರ್ತನೂ ಹೌದು. ನಾಗದೇವರು ಮಹಾ ಚೈತನ್ಯದ (ವಿಷ್ಣು) ಸಂಕರ್ಷಣಾ ಶಕ್ತಿ. ಸಂಕರ್ಷಣಾ ಶಕ್ತಿ ಈ ನಾಗದೇವರ ಅಭಿಮಾನಿ ದೇವರು ಸುಬ್ರಹ್ಮಣ್ಯ.

ಭಾರತ ದೇಶ ಮಾತ್ರವಲ್ಲದೆ ಅನೇಕ ದೇಶಗಳಲ್ಲಿ ನಾಗಾರಾಧನೆ ಇದೆ. ಗ್ರೀಕ್ ದೇಶದ ರಾಷ್ಟ್ರ ಲಾಂಛನ ಸರ್ಪ. ಅಲ್ಲಿನ ಅಥೆನ್ಸ್ ನಗರದ ಕಾವಲಿಗಾಗಿ ನಾಲ್ಕು ದಿಕ್ಕುಗಳಲ್ಲಿ ಸರ್ಪ ದೇವಾಲಯವಿದೆ. ಫೆಸಿಫಿಕ್ ಮಹಾಸಾಗರವನ್ನು ಸರ್ಪವು ಆಳುತ್ತಿತ್ತು ಎಂಬುದು ಕಾಂಬೊಡಿಯನ್ನರ ನಂಬಿಕೆ. ಬ್ಯಾಂಕಾಕ್ ಥೈಲ್ಯಾಂಡ್ ಮತ್ತು ಜಾವಾದಲ್ಲಿ ನಾಗರ ಹಾವುಗಳನ್ನು ಡ್ರಾಗನ್ ಎಂದು ಪೂಜಿಸುತ್ತಾರೆ. ಅಗಲಿದ ಪಿತೃಗಳು ನಾಗನ ರೂಪದಲ್ಲಿ ಅವತರಿಸುತ್ತಾರೆ ಎಂಬ ನಂಬಿಕೆ ಮಧ್ಯ ಏಷ್ಯಾದಲ್ಲಿದೆ.

ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರು ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ 52 ಮಂದಿ ಸರ್ಪಶ್ರೇಷ್ಠರೂ ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿ ವರ್ಣಿತವಾಗಿದೆ.

ಶಿವನ ಕುತ್ತಿಗೆಯ ಆಭರಣವಾಗ, ವಿಷ್ಣುವಿಗೆ ಹಾಸಿಗೆಯಾಗಿ, ಗಣಪತಿ ಹೊಟ್ಟೆಗೆ ಪಟ್ಟಿಯಾಗಿ ನಾಗದೇವರು ಸ್ಥಾನ ಪಡೆದಿದ್ದಾರೆ. ಭೂಮಿಯನ್ನು ನಾಗದೇವರೇ ಎತ್ತಿಹಿಡಿದು ಇದ್ದಾನೆಂಬ ನಂಬಿಕೆಯಿದೆ. ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು ಕೇತು ನಾಗದೇವರನ್ನು ಪ್ರತಿನಿಧಿಸುತ್ತಾರೆ. ನಾಗ ಸಂಸ್ಕಾರ ಆಶ್ಲೇಷ ಬಲಿ ನಾಗಮಂಡಲ ಮುಂತಾದ ನಾಗದೇವರ ಸೇವೆಗಳನ್ನ ನಾಗದೇವರ ದೋಷಗಳನ್ನು ಪರಿಹರಿಸಿಕೊಳ್ಳುತ್ತಾರೆ. ನಾಗರಪಂಚಮಿ ಎಂದು ನಾಗದೇವರ ಕಲ್ಲಿಗೆ ಹಾಲು ಎರೆದು ಪೂಜೆಮಾಡಿ ಅವರ ಅನುಗ್ರಹ ಪಡೆಯುತ್ತಾರೆ.

ರೇಷ್ಮಾ ಶೆಟ್ಟಿ

Related post