“ರೇಮಂಡ್ಸ್” ಅಧಿಪತಿಯ ಕರುಣಾಜನಕ ಕಥೆ…
ಶ್ರೀಮಂತಿಕೆ ಶಾಶ್ವತವಲ್ಲ. ತಾನೊಬ್ಬ ಶ್ರೀಮಂತ ವ್ಯಕ್ತಿ ಆಗಬೇಕೆಂಬ ಬಯಕೆ ಇಂದಿನ ದಿನದಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲೂ ಇರುವುದು ಸಹಜ. ನಿಜವಾಗಿ ಸಂಪತ್ತು ಅಥವಾ ಶ್ರೀಮಂತಿಕೆ ಎನ್ನುವುದು ಒಂದು ವ್ಯಕ್ತಿಯಲ್ಲ, ಬದಲಾಗಿ ಅದೊಂದು ಸಾಧನದ ಪ್ರತಿರೂಪ ಎಂದು ಪರಿಗಣಿಸಲ್ಪಡುತ್ತದೆ. ಅಷ್ಟೇ ಅಲ್ಲದೇ ಭೌತಿಕ ಯುಗದಲ್ಲಿ ಹಣವಿಲ್ಲದ ಜೀವನವನ್ನು ಊಹೆ ಮಾಡುವುದೂ ಅಸಾಧ್ಯ. ಇದಕ್ಕಾಗಿ ಮನುಷ್ಯನು ತನ್ನ ಬದುಕನ್ನು ಸುಲಲಿತ ಮತ್ತು ಆರಾಮ ಮಾಡಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಸಂಪತ್ತನ್ನು ಗಳಿಸಲು ಹಪಹಪಿಸುತ್ತಾನೆ.

ಯಾವುದರಲ್ಲಿ ಆದರೂ ಒಂದಷ್ಟು ಹಣ ಸಿಗುತ್ತದೆ ಎಂದು ತಿಳಿದರೆ ಮನುಷ್ಯ ಸಪ್ತಸಾಗರಗಳನ್ನು ದಾಟಲೂ ಹಿಂದೆ ಮುಂದೆ ನೋಡಲಾರ. ಆದರೆ ಹಣ, ಸಂಪತ್ತು, ಐಶ್ವರ್ಯ, ಒಡವೆ ಮತ್ತು ಆಸ್ತಿ ಇವುಗಳೇ ನಮ್ಮ ಜೀವನದ ಪರಮ ಧ್ಯೇಯ ಎನ್ನುವಂತೆ ನಾವು ಬದುಕುತ್ತೇವೆ, ಆದರೆ ಇವ್ಯಾವುದೂ ನಮ್ಮೊಂದಿಗೆ ಜೀವನ ಪರ್ಯಂತ ಇರಲಾರವು ಎನ್ನುವದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ.
ರೇಮಂಡ್ಸ್ ಕಂಪನಿಯು ಭಾರತೀಯ ಒಡೆತನದ ಬ್ರಾಂಡೆಡ್ ಫ್ಯಾಬ್ರಿಕ್ ಮತ್ತು ಫ್ಯಾಶನ್ ರಿಟೇಲರ್ ಕಂಪೆನಿಯಾಗಿದೆ. ಇದನ್ನು 1925ರಲ್ಲಿ ಆಲ್ಬರ್ಟ್ ರೇಮಂಡ್ ಎನ್ನುವವರು ಸ್ಥಾಪಿಸಿದರು. ಈ ಕಂಪೆನಿಯು 31 ಮಿಲಿಯನ್ ಮೀಟರ್ ಉದ್ದದ ಉಣ್ಣೆ ಮತ್ತು ಉಣ್ಣೆ ಮಿಶ್ರಿತ ಸೂಟಿಂಗ್ ಫ್ಯಾಬ್ರಿಕ್ಸ್ಗಳನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಕಂಪೆನಿ ಆಗಿತ್ತು. ಈ ಕಂಪೆನಿಯು ರೇಮಂಡ್, ರೇಮಂಡ್ ಪ್ರೀಮಿಯಂ ಅಪ್ಯಾರಲ್, ರೇಮಂಡ್ ಮೇಡ್ ಟು ಮೆಷರ್, ಎಥ್ನಿಕ್ಸ್, ಪಾರ್ಕ್ ಅವೆನ್ಯೂ ವುಮನ್, ಕಲರ್ಪ್ಲಸ್, ಕಾಮಸೂತ್ರ ಮತ್ತು ಪಾರ್ಕ್ಸ್ನಂತಹ ಬ್ರಾಂಡೆಡ್ ಉಡುಪುಗಳನ್ನು ಉತ್ಪಾದಿಸುತ್ತದೆ. ಈ ಎಲ್ಲಾ ಬ್ರ್ಯಾಂಡ್ ಫ್ಯಾಬ್ರಿಕ್ಸನ್ನು 700 ದೇಶೀಯ ಮತ್ತು 200 ವಿದೇಶೀ ನಗರಗಳ ‘ದಿ ರೇಮಂಡ್ ಶಾಪ್’ ಎಂಬ ರಿಟೇಲ್ ಅಂಗಡಿಗಳ ಮೂಲಕ ಮಾರಾಟ ಮಾಡುತ್ತದೆ. ಇಷ್ಟೇ ಅಲ್ಲದೇ ಈ ಕಂಪೆನಿಯು ಸಿದ್ಧ ಉಡುಪುಗಳು, ವಿನ್ಯಾಸದ ಉಡುಗೆಗಳು, ಸೌಂದರ್ಯವರ್ಧಕಗಳು ಮತ್ತು ಶೌಚಾಲಯ ಪರಿಕರಗಳು, ಎಂಜಿನಿಯರಿಂಗ್ ಫೈಲ್ಗಳು ಮತ್ತು ರೋಗನಿರೋಧಕ ಔಷಧಿಗಳ ತಯಾರಿಕೆಯಂತಹ ವ್ಯವಹಾರವನ್ನೂ ನಿರ್ವಹಿಸುತ್ತಿದೆ. 2019ರಲ್ಲಿ, ರೇಮಂಡ್ ರಿಯಾಲ್ಟಿ ಎನ್ನುವ ಹೆಸರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಕೈ ಹಾಕಿದ್ದು, ಮುಂಬೈನ ಥಾಣೆಯಲ್ಲಿ 20 ಎಕರೆ ಭೂಮಿಯಲ್ಲಿ 250 ಕೋಟಿ ವೆಚ್ಚದ ವಸತಿ ಘಟಕಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಸಂಸ್ಥೆಯು ಈ ಪ್ರದೇಶದಲ್ಲಿ 125 ಎಕರೆ ಸ್ವಂತ ಭೂಮಿಯನ್ನೂ ಹೊಂದಿದೆ.
ಇಂತಹ ಶ್ರೀಮಂತ ಕಂಪೆನಿ ಹಾಗೂ ಸುಮಾರು ಹದಿಮೂರು ಲಕ್ಷ ಕೋಟಿ ಸಂಪತ್ತಿನ ಒಡೆಯ ಹಾಗೂ ಈ ಕಂಪನಿಯ ಅಧ್ಯಕ್ಷರಾಗಿದ್ದ ವಿಜಯಪತ್ ಸಿಂಘಾನಿಯಾ ಇಂದಿನ ಬದುಕಿನ ಕಥೆಯನ್ನು ಒಮ್ಮೆ ನೋಡೋಣ.
ರೇಮಂಡ್ಸ್ ಕಂಪನಿಯ ಮಾಜಿ ಅಧ್ಯಕ್ಷರ ಕಠಿಣ ಬದುಕಿನ ಕಥೆ:

ರೇಮಂಡ್ ಗ್ರೂಪ್ನ ಮಾಜಿ ಅಧ್ಯಕ್ಷರು ಮತ್ತು ಸಾಹಸಿ ಕ್ರೀಡೆಗಳ ಪ್ರವರ್ತಕರಾಗಿದ್ದ ವಿಜಯಪತ್ ಸಿಂಘಾನಿಯಾ ಅವರು ನಮ್ಮ ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಆಗಿದ್ದರು. ಸುಖದ ಸುಪ್ಪತ್ತಿಗೆಯಲ್ಲಿ ಮಿಂದೇಳುತ್ತಿದ್ದ ಇವರು ಇಂದು ಮುಂಬೈಯ ಒಂದು ಸಾಧಾರಣ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದರೆ ಅಚ್ಚರಿ ಪಡಲೇಬೇಕು. ಇದು ಅಗರ್ಭ ಶ್ರೀಮಂತಿಕೆಯೂ ಇಂದು ಶಾಶ್ವತವಲ್ಲ ಎಂದು ಸ್ಪಷ್ಟಪಡಿಸುತ್ತಿದೆ. ರೇಮಂಡ್ಸ್ ಬಟ್ಟೆಯ ಬಗ್ಗೆ ನಾವೆಲ್ಲರೂ ಬಹಳಷ್ಟು ಕೇಳಿರುತ್ತೇವೆ. ಮದುವೆ ಸಮಾರಂಭಗಳಿಗೆ ಪುರುಷರು ರೇಮಂಡ್ಸ್ ಸೂಟನ್ನೇ ಖರೀದಿಸಲು ರೇಮಂಡ್ಸ್ ಶೋರೂಂಗೆ ಹೋಗುತ್ತಾರೆ. ಇಂತಹ ಐಶಾರಾಮಿ ರೇಮಂಡ್ಸ್ ಕಂಪನಿಯ ಒಟ್ಟು ಸ್ವತ್ತು ಮೌಲ್ಯ 13 ಲಕ್ಷ ಕೋಟಿಗೂ ಹೆಚ್ಚು. ಇಂತಹ ಶ್ರೇಷ್ಠ ಕಂಪನಿಯ ಆಡಳಿತಗಾರರಾಗಿದ್ದ ವ್ಯಕ್ತಿ ಇಂದು ಇಂತಹ ಶ್ರೀಮಂತಿಕೆ ಇಲ್ಲದೇ ಕಠಿಣ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ಎಲ್ಲಾ ರೀತಿಯ ವೈಭೋಗಗಳನ್ನು ಹೊಂದಿದ್ದು ಸುಖದ ಸುಪ್ಪತ್ತಿಗೆಯ ಜೀವನ ನಡೆಸುತ್ತಿದ್ದ ವಿಜಯಪತ್ ಅವರ ಇಂದಿನ ಆದಾಯ ಕೇವಲ ಅವರ ಊಟಕ್ಕೆ ಮತ್ತು ಬಟ್ಟೆಗೆ ಸಾಕಾಗುವಷ್ಟೇ ಇದೆ. ವಿಜಯ್ಪತ್ ಅವರಿಗೆ ಇಂತಹ ಪರಿಸ್ಥಿತಿ ಬರಲು ಇವರ ಒಡೆತನದಲ್ಲಿ ಇದ್ದ ರೇಮಂಡ್ಸ್ ಕಂಪನಿ ಈಗ ವ್ಯವಹಾರದಲ್ಲಿ ಉನ್ನತ ಸ್ಥಿತಿಯಲ್ಲಿ ಇದ್ದು, ವ್ಯಾವಹಾರಿಕ ನಷ್ಟದಿಂದ ಅವರಿಗೆ ಈ ಪರಿಸ್ಥಿತಿ ಬಂದಿಲ್ಲ. ಬದಲಾಗಿ ಬಲ್ಲ ಮೂಲಗಳ ಪ್ರಕಾರ, ಇವರ ಈ ಕಠಿಣ ಪರಿಸ್ಥಿತಿಗೆ ಅವರ ಕೌಟುಂಬಿಕ ಸಮಸ್ಯೆಯೇ ಕಾರಣ. ತನ್ನ ಕಿರಿಯ ಪುತ್ರನೊಂದಿಗೆ ನಡೆದ ಜಗಳದ ಕಾರಣದಿಂದ ಪ್ರಸ್ತುತ ವಿಜಯ್ಪತ್ ಸಿಂಘಾನಿಯಾ ಅವರು ಇಂತಹ ಸ್ಥಿತಿಗೆ ಬಂದಿದ್ದಾರೆ.

ವಿಜಯಪತ್ ಅವರು ತನ್ನ ರೇಮಂಡ್ಸ್ ಕಂಪೆನಿಯಲ್ಲಿ 37% ಷೇರನ್ನು ಹೊಂದಿದ್ದು, ಉತ್ತಮ ಸ್ಥಿತಿಯಲ್ಲಿ ಇದ್ದರು. 2015ರಲ್ಲಿ ತನ್ನಲ್ಲಿ ಇದ್ದ ಎಲ್ಲಾ ಷೇರುಗಳನ್ನು ಕಿರಿಯ ಮಗನಾದ ಗೌತಮ್ ಸಿಂಘಾನಿಯಾಗೆ ಉಚಿತವಾಗಿ ಕೊಟ್ಟುಬಿಟ್ಟರು. ಇದಾದ ಕೆಲವೇ ವರ್ಷಗಳಲ್ಲಿ ರೇಮಂಡ್ ಗ್ರೂಪ್ ಆಫ್ ಕಂಪನೀಸ್ ನ ವಿಶ್ರಾಂತ ಅಧ್ಯಕ್ಷ (ಎಮಿರಿಟಸ್) ಹುದ್ದೆಯಿಂದ ವಿಜಯ್ಪತ್ ಅವರನ್ನು ಮಗನೇ ವಜಾ ಮಾಡಿದರು. ಇದರ ನಂತರ ವಿಜಯಪತ್ ಅವರಿಗೆ ಸ್ವಂತಕ್ಕೆಂದು ಒಂದು ಮನೆಯೂ ಇಲ್ಲವಾಯಿತು. ವಿಜಯಪತ್ರ ಹಿರಿಯ ಮಗ ಮಧುಪತಿ ಸಿಂಘಾನಿಯಾ ಅವರು ತನ್ನ ಕುಟುಂಬದಿಂದ ಪ್ರತ್ಯೇಕವಾಗಿ ಮುಂಬೈನ ತನ್ನ ತಂದೆಯ ಸಮಸ್ತ ಆಸ್ತಿಯನ್ನು ತನ್ನ ಸಹೋದರನಿಗೆ ಬಿಟ್ಟುಕೊಟ್ಟು ಸಿಂಗಾಪುರದಲ್ಲಿ ನೆಲೆಸಿದ್ದಾರೆ. ತನ್ನ ಕಿರಿಯ ಸಹೋದರ ಗೌತಮ್ ಪರವಾಗಿ ತಂದೆ ವಿಜಯಪತ್ ಅವರು ನಿಂತದ್ದರಿಂದ ಮತ್ತು ಇವರಿಬ್ಬರಿಂದ ಹಿರಿಯ ಮಗ ಮಧುಪತಿ ಅವರಿಗೆ ಆಸ್ತಿ ವಿಚಾರವಾಗಿ ಸಾಕಷ್ಟು ಅವಮಾನ ಆದ್ದರಿಂದ ಈ ರೀತಿ ಆಗಿತ್ತು ಎನ್ನುವ ಮಾತಿದೆ. ಹಿರಿಯ ಪುತ್ರ ಮಧುಪತಿ ಅವರು ತಂದೆಯಿಂದ ದೂರವಾದ ಬಳಿಕ ತಂದೆ ವಿಜಯ್ಪತ್ ಅವರಿಗೆ ಕಿರಿಯ ಮಗ ಮೋಸ ಮಾಡಿದ್ದು, ಈ ಇಬ್ಬರ ಮಧ್ಯೆ ಕೋರ್ಟಲ್ಲಿ ಆಸ್ತಿ ಕುರಿತಾಗಿ ವ್ಯಾಜ್ಯ ಇನ್ನೂ ನಡೆಯುತ್ತಿದೆ.
ಸಿಂಘಾನಿಯಾ ಅವರ ಕುಟುಂಬ ನೂರಕ್ಕೂ ಹೆಚ್ಚು ವರ್ಷಗಳಿಂದ ಸಿದ್ಧ ಉಡುಪು ಉದ್ಯಮದಲ್ಲಿ ಹೆಸರು ಮಾಡಿತ್ತು. 80 ಮತ್ತು 90ರ ದಶಕದಲ್ಲಿ ರೇಮಂಡ್ಸ್ ಸಂಸ್ಥೆಯು ವಿಜಯ್ಪತ್ ಸಿಂಘಾನಿಯಾ ಅವರ ಚುಕ್ಕಾಣಿಯಲ್ಲಿ ಇದ್ದಾಗ ವ್ಯಾವಹಾರಿಕವಾಗಿ ಹೊಸ ಮೈಲಿಗಲ್ಲನ್ನು ತಲುಪಿತ್ತು. ಪ್ರಸ್ತುತ ಕಿರಿಯ ಮಗ ಗೌತಮ್ ಸಿಂಘಾನಿಯಾ ಅವರ ನೇತೃತ್ವದಲ್ಲೂ ರೇಮಂಡ್ ಗ್ರೂಪ್ ಮತ್ತಷ್ಟು ಎತ್ತರಕ್ಕೇರಿದೆ. ವಿಮಾನಯಾನ, ಕಾರ್ ರೇಸಿಂಗ್ ಮುಂತಾದ ಸಾಹಸ ಕ್ರೀಡೆಗಳಿಗೆ ಪ್ರಾಯೋಜಕರಾಗಿದ್ದು, ಈ ಕ್ರೀಡೆ ಹಾಗೂ ಕ್ರೀಡಾಳುಗಳಿಗೆ ಪ್ರೇರಣೆಯನ್ನು ಇವರು ನೀಡುತ್ತಿದ್ದರಿಂದ ಇವರಿಗೆ ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿಯೂ ದೊರೆತಿತ್ತು. ಇವರಿಗೆ ಭಾರತೀಯ ವಾಯುಸೇನೆಯು ಗೌರವ ವಾಯುಸೇನಾ ಕಮಾಂಡರ್ ರ್ಯಾಂಕ್ ನೀಡಿತ್ತು. ವಿಜಯ್ಪತ್ ಅವರು ತನ್ನ ಕಿರಿಯ ಮಗನ ಮೇಲಿನ ವ್ಯಾಮೋಹದಿಂದ ರೇಮಂಡ್ಸ್ ಗ್ರೂಪ್ಸ್ನ 37% ಷೇರಿನ ಪಾಲನ್ನು ಅವರಿಗೆ ನೀಡದೇ ಉಳಿಸಿಕೊಂಡಿದ್ದರೆ, ಇಂದು ಇವರು ಲಕ್ಷಾಂತರ ಕೋಟಿ ರೂಪಾಯಿ ಆಸ್ತಿಗಳ ಒಡೆಯರಾಗಿ ಇರುತ್ತಿದ್ದರು.

ಈ ಘಟನೆಯಿಂದ ಯಾರ ಮೇಲೂ ಅತಿಯಾದ ವ್ಯಾಮೋಹ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದು ತಿಳಿದುಬರುತ್ತದೆ. ವ್ಯಾಮೋಹ ಎಂದರೆ ಒಬ್ಬ ವ್ಯಕ್ತಿಯ ಮೇಲೆ ಅಥವಾ ಒಂದು ವಸ್ತುವಿನ ಮೇಲಿನ ಅತಿಯಾದ ಮೋಹ. ಮೋಹವನ್ನು ಬಿಡಬೇಕು ಎಂದು ಹೇಳುವುದು ಬಲು ಸುಲಭ; ಆದರೆ ಬಿಡುವುದು ಬಹಳ ಕಷ್ಟ. ಎಂತೆಂತಹ ಮಹಾಜ್ಞಾನಿಗಳನ್ನೂ ಈ ಮೋಹ ಬಿಡಲಿಲ್ಲ. ಇಲ್ಲಿ ತಂದೆಗೆ ಕಿರಿಯ ಪುತ್ರನ ಮೇಲಿದ್ದ ವ್ಯಾಮೋಹದಿಂದ ಹಿರಿಯ ಮಗ ಇಡೀ ಕುಟುಂಬವನ್ನೇ ತೊರೆದು ವಿದೇಶದಲ್ಲಿ ನೆಲೆಸಿದರೆ, ಅತಿಯಾಗಿ ವ್ಯಾಮೋಹವಿದ್ದ ಕಿರಿಯ ಮಗನೇ ತನ್ನ ತಂದೆಯ ಸಮಸ್ತ ಆಸ್ತಿಯನ್ನೂ ಕಸಿದುಕೊಂಡು ತಂದೆಯನ್ನೇ ಬೀದಿಯಲ್ಲಿ ನಿಲ್ಲಿಸಿಬಿಟ್ಟರು ಎಂದರೆ ತಪ್ಪಾಗದು.
ಬಂಗಾರವ ಹೊರತುಪಡಿಸಿ ಮನುಷ್ಯನಿಗೆ ಅತೀ ಹೆಚ್ಚಿನ ವ್ಯಾಮೋಹವಿರುವುದು ಈ ಮಣ್ಣಿನ ಮೇಲೆ ಮಾತ್ರ. ಜಗತ್ತಿನೆಲ್ಲಾ ಕದನಗಳು ಬಹುತೇಕ ನಡೆದಿರುವುದೇ ಈ ಮಣ್ಣಿಗಾಗಿ ಮತ್ತು ಮಕ್ಕಳಿಗಾಗಿ. ಮಕ್ಕಳ ಮೇಲಿನ ವ್ಯಾಮೋಹವು ಒಂದು ಮಿತಿಯ ವರೆಗೆ ಉತ್ತಮ. ಆದರೆ ಮಕ್ಕಳು ತಪ್ಪು ಮಾಡಿದಾಗ ಅವರಿಗೆ ತೀಸಿ ಹೇಳಬೇಕು ಅಥವಾ ಅವರನ್ನು ಆಗಲೇ ದಂಡಿಸಬೇಕು. ಅತಿಯಾದರೆ ಎಲ್ಲವೂ ವಿಷವಾಗುತ್ತದೆ. ಮಕ್ಕಳ ಮೇಲಿನ ಪ್ರೀತಿ ಮತ್ತು ವ್ಯಾಮೋಹವನ್ನು ನಮ್ಮೊಳಗೇ ಮುಚ್ಷಿ ಇಟ್ಟುಕೊಂಡು ತಮ್ಮ ಸರ್ವಸ್ವವನ್ನೂ ಮಕ್ಕಳಿಗೆ ಧಾರೆಯೆರೆಯುವ ಬದಲು ತಮ್ಮ ಬದುಕಿನ ಅನಿವಾರ್ಯ ಅವಶ್ಯಕತೆಗಾಗಿ ಒಂದಷ್ಟು ಸಂಪತ್ತನ್ನಾದರೂ ತೆಗೆದು ಇಟ್ಟುಕೊಳ್ಳಬೇಕು. ಆದ್ದರಿಂದ ಪ್ರತಿಯೊಬ್ಬ ಹೆತ್ತವರಿಗೂ ತಮ್ಮ ಮೇಲೆ ತಮಗೇ ಕಿಂಚಿತ್ತಾದರೂ ವ್ಯಾಮೋಹ ಇರಬೇಕಾದ ಅನಿವಾರ್ಯತೆಯೂ ಇದೆ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160